ಬೆಂಗಳೂರು ಸೆ14: ಡೀಸೆಲ್ ಬಸ್ ಗಳ ಬದಲಿಗೆ ವಿದ್ಯುತ್ ಚಾಲಿತ ಬಸ್ ಗಳನ್ನು ರಸ್ತೆಗಿಳಿಸಲು ಕೆಎಸ್ಆರ್ ಟಿಸಿ ಚಿಂತಿಸಿದೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ. ಶಾಂತಿನಗರದಲ್ಲಿರುವ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಡೀಸೆಲ್ ಬಸ್ ಗಳಿಂದ ಬರೋ ಆದಾಯದಲ್ಲಿ ಶೇ.80 ರಷ್ಟು ಹಣ ಇಂಧನಕ್ಕೇ ವ್ಯಯವಾಗುತ್ತಿದ್ದು , ಇನ್ನುಳಿದ ಶೇ.20 ರಷ್ಟು ಆದಾಯದಲ್ಲಿ ಸಂಸ್ಥೆಯನ್ನು ನಡೆಸಬೇಕಿದೆ.ಹಾಗಾಗಿ ಎಲೆಕ್ಟ್ರಾನಿಕ್ ಬಸ್ ಪರಿಚಯಿಸುವ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ. ಬಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು 150 ವಿದ್ಯುತ್ ಚಾಲಿತ ಬಸ್ ಗಳನ್ನು ಲೀಸ್ ಗೆ ಕೊಡುವಂತೆ ಕೇಳಿದ್ದೇವೆ, ಪ್ರಾಯೋಗಿಕವಾಗಿ ಬಸ್ ಗಳನ್ನು ಓಡಿಸಿ ನಂತರ ಖರೀದಿ ಮಾಡುತ್ತೇವೆ ಎಂದರು.ಈಗಾಗಲೇ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಕ್ಕಾಗಿ ಪ್ರತ್ಯೇಕ ನೀತಿ ಪ್ರಕಟಿಸಿದೆ.ಅದಕ್ಕೂ ಮೊದಲು ಪಾಲಿಸಿಗೆ ನಾವು ಸಿದ್ದರಾಗಬೇಕಿದೆ, ವಿದ್ಯುತ್ ಚಾರ್ಜರ್ ಅಳವಡಿಸಬೇಕಿದೆ, ಇನ್ನೂ ಇದು ಚರ್ಚೆಯ ಹಂತಲ್ಲಿದ್ದು,ಸಾಕಷ್ಟು ಸಮಯ ಬೇಕು, ಹಂತ ಹಂತವಾಗಿ ಇದನ್ನು ಅಳವಡಿಸಲಾಗುತ್ತದೆ ಎಂದರು.
![](https://daijiworld.ap-south-1.linodeobjects.com/iWeb/tvdaijiworld/img_tv247/14092017_hmravanna.jpg)
ನಾಲ್ಕು ವರ್ಷದಲ್ಲಿ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಅತ್ಯತ್ತಮ ಸಾರಿಗೆ ವ್ಯವಸ್ಥೆ ಹಿರಿಮೆ ಸಿಕ್ಕಿದೆ.2013 ರ ನಂತರ ಸಾರಿಗೆ ವ್ಯವಸ್ಥೆಗೆ ಸಿಎಂ ಹೆಚ್ಚು ಹಣ ಮಂಜೂರು ಮಾಡುವ ಮೂಲಕ ನಾಲ್ಕು ನಿಗಮಗಳ ಪ್ರಗತಿಗೆ ಸಹಕಾತ ನೀಡಿದ್ದಾರೆ ಅದರ ಫಲವಾಗಿ ರಾಷ್ಟ್ರೀಯ,ಅಂತಾರಾಷ್ಟ್ರೀಯ ಸೇರಿ ಕೆಎಸ್ ಆರ್ ಟಿಸಿ 209 ಪ್ರಶಸ್ತಿ ಪಡೆದಿದೆ ಎಂದು ತಿಳಿಸಿದ್ದಾರೆ.