ಮಂಗಳೂರು,ಮೇ. 09 (DaijiworldNews/AK): ತೊಕ್ಕೊಟ್ಟು ಬಳಿಯ ಆಡಂಕುದ್ರುವಿನ ಗ್ಲೋಬಲ್ ಮಾರುಕಟ್ಟೆ ಪ್ರದೇಶದ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಒಂದು ಭಾಗದ ರಸ್ತೆಯನ್ನು ರಾತ್ರಿ 8ರ ವೇಳೆಗೆ ದುರಸ್ತಿ ನಡೆಸುವ ಉಡುಪಿ ಟೋಲ್ ವೇ ಪ್ರೈವೇಟ್ ಲಿ. ಸಂಸ್ಥೆಯ ಗುತ್ತಿಗೆ ಆಧಾರಿತ ಸುರಕ್ಷತಾ ಮೇಲ್ವಿಚಾರಕರೊಬ್ಬರಿಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾಧಿಕಾರಿ ಹಲ್ಲೆ ನಡೆಸಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ.

ಸುರಕ್ಷತಾ ಮೇಲ್ವಿಚಾರಕ ಆಗಿರುವ ಸಚಿನ್ ಶುಕ್ಲಾ ಕೈಗೆ ಸಂಚಾರಿ ಠಾಣಾಧಿಕಾರಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಡರಾತ್ರಿ ಕಾಮಗಾರಿಯನ್ನು ಆಕ್ಷೇಪಿಸಿದ ಠಾಣಾಧಿಕಾರಿ ಕೃಷ್ಣಾನಂದ ಅವರು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ನೇತ್ರಾವತಿ ಸೇತುವೆಯ ದುರಸ್ತಿ ಕಾರ್ಯದ ಸಮಯದಲ್ಲಿ ಇತ್ತೀಚೆಗೆ ಅನುಭವಿಸಿದ ಸಂಚಾರ ದಟ್ಟಣೆಯನ್ನು ಪರಿಗಣಿಸಿ, ತಡರಾತ್ರಿಯ ಕೆಲಸಕ್ಕೆ ಪೊಲೀಸ್ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.