ನವದೆಹಲಿ, ಫೆ.04 (DaijiworldNews/AA): ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತವು ದೊಡ್ಡ ಘಟನೆಯಲ್ಲ. ಆದರೆ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಅಲ್ಲದೆ ಕುಂಭಮೇಳದ ನಿರ್ವಹಣೆಯು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ ತಿಳಿಸಿದ್ದಾರೆ.

ಈ ವಿಚಾರವಾಗಿ ಸಂಸತ್ ಆವರಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ಕೂಡ ಕುಂಭಕ್ಕೆ ಹೋಗಿದ್ದೇವೆ. ಪವಿತ್ರ ಸ್ನಾನವನ್ನು ಮಾಡಿದ್ದೇವೆ. ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿದೆ. ಕಾಲ್ತುಳಿತ ನಡೆದಿರುವುದು ನಿಜ. ಆದರೆ ದೊಡ್ಡ ಘಟನೆಯಲ್ಲ. ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭಮೇಳವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ನಿರ್ವಹಣೆಯು ಕಷ್ಟಕರವಾದರೂ ನಮ್ಮಿಂದ ಸಾಧ್ಯವಾದಷ್ಟು ಮಾಡಲಾಗುತ್ತಿದೆ ಎಂದು ಹೇಳಿದರು.
ಕುಂಭಮೇಳದಲ್ಲಿ ಮೃತಪಟ್ಟವರ ನಿಖರ ಅಂಕಿಯನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಇದು ವಿಪಕ್ಷಗಳ ಕೆಲಸ. ಅವರಿಗೆ ತೋಚಿದ್ದನ್ನು ಹೇಳುತ್ತಲೇ ಇರುತ್ತಾರೆ ಎಂದರು.