ಮಂಗಳೂರು, ಫೆ.04 (DaijiworldNews/AK): ಕೇಂದ್ರ ಸರಕಾರದ 2025ರ ಬಜೆಟ್ ಐತಿಹಾಸಿಕವಾದುದು. ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿ ಅನೇಕ ವಿಧದ ಸವಲತ್ತುಗಳನ್ನು ಕೇಂದ್ರ ಬಜೆಟ್ನಲ್ಲಿ ಒದಗಿಸುವ ಮೂಲಕ ಅವರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ಬಜೆಟ್ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವಾರ್ಷಿಕ 12 ಲಕ್ಷ ರೂ. ತನಕದ ಆದಾಯಕ್ಕೆ ಆದಾಯ ತೆರಿಗೆಯಿಂದ ಮುಕ್ತಿ ನೀಡಿದ ಐತಿಹಾಸಿಕ ನಿರ್ಣಯವು ಜನ ಸಾಮಾನ್ಯ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರದ ಭರ್ಜರಿ ಗಿಫ್ಟ್. ಇದರಿಂದ 10 ಕೋಟಿ ಜನರಿಗೆ ಲಾಭವಾ ಗಲಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಯ ಪರಿಣಾಮ ಸರಕಾರಿ ಶಾಲೆಗೆಳಿಗೆ ಕಂಪ್ಯೂಟರ್, 3ಡಿ ಪ್ರಿಂಟರ್ಸ್, ವಿದ್ಯಾರ್ಥಿಗಳಿಗೆ ಅನ್ವೇಷಣೆ ಮಾಡಲು ಅವಕಾಶ, ಇಲೆಕ್ಟ್ರಾನಿಕ್ ಕಿಟ್ ಮುಂತಾದವುಗಳನ್ನು ಕೇಂದ್ರ ಸರಕಾರ ಒದಗಿಸಲಿದೆ. ವಿಮಾ ಕ್ಷೇತ್ರದಲ್ಲಿ ವಿದೇಶೀ ಹೂಡಿಕೆ ಮಿತಿಯನ್ನು ಶೇ. 74ರಿಂದಂದ ಶೇ. 100ಕ್ಕೆ ಏರಿಕೆ ಮಾಡಿರುವುದರಿಂದಾಗಿ ಹೊಸ ಉದ್ಯೋಗ ಸೃಷ್ಟಿ, ಇನ್ಸೂರೆನ್ಸ್ ಪ್ರೀಮಿಯಂ ಕಡಿಮೆಯಲ್ಲಿ ಲಭ್ಯ ಆಗಲಿದೆ. ಮುಂದಿನ 5 ವರ್ಷಗಳಲ್ಲಿ 75000 ವೈದ್ಯಕೀಯ ಸೀಟುಗಳ ಏರಿಕೆಯಿಂದ ವೈದ್ಯಕೀಯ ವಿದ್ಯಾರ್ಹತೆ ಪಡೆದು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಕ್ತಾರ ಅರುಣ್ ಶೇಟ್, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.