ಮುಂಬೈ, ಏ. 09 (DaijiworldNews/AK): ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್ನಲ್ಲಿ ಸಿಂಗಲ್ ತೆಗೆದುಕೊಳ್ಳದೇ ಡೆಲ್ಲಿ ಸೋಲಿಗೆ ಕಾರಣರಾದ ಡೇವಿಡ್ ಮಿಲ್ಲರ್ ನಿರ್ಧಾರದ ವಿರುದ್ಧ ಆರ್.ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಗೆಲುವಿಗೆ ಕೊನೆ ಎರಡು ಬಾಲ್ಗೆ 2 ರನ್ ಬೇಕಿತ್ತು. ಡೇವಿಡ್ ಮಿಲ್ಲರ್ ಸ್ಟ್ರೈಕ್ನಲ್ಲಿದ್ದರು. ಕುಲ್ದೀಪ್ ಯಾದವ್ ನಾನ್ ಸ್ಟ್ರೈಕ್ನಲ್ಲಿದ್ದರು. ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡುತ್ತಿದ್ದರು. ಐದನೇ ಎಸೆತವನ್ನು ಆಡಿದ ಮಿಲ್ಲರ್ ಸಿಂಗಲ್ಗೆ ಅವಕಾಶವಿದ್ದರೂ ಓಡಲಿಲ್ಲ. ಸಿಂಗಲ್ ತೆಗೆದುಕೊಂಡಿದ್ದರೆ ಪಂದ್ಯ ಡ್ರಾ ಆಗುತ್ತಿತ್ತು. ಆದರೆ, ಸಿಂಗಲ್ ನಿರಾಕರಿಸಿದ ಮಿಲ್ಲರ್ ಕೊನೆ ಬಾಲ್ಗೆ ಚಾನ್ಸ್ ಇಟ್ಟುಕೊಂಡರು. ಪ್ರಸಿದ್ಧ್ ಕೃಷ್ಣ ಚಾಣಾಕ್ಷತನದ ಬೌಲಿಂಗ್ನಿಂದ ಕೊನೆ ಬಾಲ್ ಡಾಟ್ ಆಯಿತು. ಕಷ್ಟವಿದ್ದರೂ ರನ್ ಓಡಲು ಮುಂದಾಗಿ ಕುಲ್ದೀಪ್ ರನೌಟ್ ಆದರು. ಮಿಲ್ಲರ್ನ ತಪ್ಪು ನಿರ್ಧಾರದಿಂದ ಡೆಲ್ಲಿ 1 ರನ್ಗಳಿಂದ ಸೋತಿತು.
ಅದ್ಭುತ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದ ಮಿಲ್ಲರ್ ಕೊನೆ ಎರಡು ಬಾಲ್ ಇದ್ದಾಗ ತೆಗೆದುಕೊಂಡ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ.
ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್ ಸೇರಿದಂತೆ ಅನೇಕರು ಮಿಲ್ಲರ್ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿಲ್ಲ. ಬದಲಾಗಿ ಮಿಲ್ಲರ್ ಜವಾಬ್ದಾರಿಯುತ ಆಟವನ್ನು ಮೆಚ್ಚಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದರೆ, ಮಿಲ್ಲರ್ ನಿರ್ಧಾರಕ್ಕೆ ಆರ್.ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನೇನಾದರೂ ಕುಲ್ದೀಪ್ ಜಾಗದಲ್ಲಿ ಇದ್ದಿದ್ದರೆ, ಸಿಂಗಲ್ ತೆಗೆದುಕೊಳ್ಳುವಂತೆ ಮಿಲ್ಲರ್ನನ್ನು ಒತ್ತಾಯಿಸುತ್ತಿದ್ದೆ’ ಎಂದು ಪ್ರತಿಕ್ರಿಯಿಸಿದ್ದಾರೆ.