ಮುಂಬೈ, ಫೆ. 28 (DaijiworldNews/AK):ಟೀಮ್ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ಅವರು ಇಂದು (ಫೆ.28) ಕೋಲ್ಕತ್ತಾದಲ್ಲಿ ಭಾರತ ತಂಡವನ್ನು ಮತ್ತೆ ಸೇರಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಅವರು ಟೀಮ್ ಇಂಡಿಯಾಗೆ ಮರಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ (54 ವರ್ಷ) ಅವರು ಲಿವರ್ ಕ್ಯಾನ್ಸರ್ನಿಂದಾಗಿ ಫೆಬ್ರವರಿ 27, ಶುಕ್ರವಾರ ಮುಂಜಾನೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೀಗಾಗಿ ಅವರು ಶುಕ್ರವಾರವೇ ಅಲಿಗಢಕ್ಕೆ ತೆರಳಿ ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದರು.
ತಂದೆಯ ಅಗಲಿಕೆಯ ನೋವಿನ ನಡುವೆಯೂ ರಿಂಕು ಸಿಂಗ್ ಭಾರತದ ಪರ ಆಡಲು ಮನಸ್ಸು ಮಾಡಿದ್ದಾರೆ. ಅದರಂತೆ ಇಂದು ಕೋಲ್ಕತ್ತಾಗೆ ತಲುಪಲಿದ್ದು, ಕೂಡಲೇ ಈಡನ್ ಗಾರ್ಡನ್ಸ್ನಲ್ಲಿ ತಂಡದ ಅಭ್ಯಾಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 1, 2026 ರಂದು ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡವು ಸೆಮಿಫೈನಲ್ಗೇರಲಿದೆ.