ವಡೋದರಾ, ಜ. 12 (DaijiworldNews/AA): ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಈ ಪಂದ್ಯದ ನಡುವೆ ರಾಷ್ಟ್ರಭಾಷೆಯ ಚರ್ಚೆ ಶುರುವಾಗಿದೆ.

ಅತ್ತ ಕೆಎಲ್ ರಾಹುಲ್ಗೆ ತಮಿಳು ಬರುತ್ತಿದ್ದು, ಇತ್ತ ತಮಿಳುನಾಡು ಮೂಲದ ಕ್ರಿಕೆಟಿಗನೊಂದಿಗೆ ತಮಿಳಿನಲ್ಲೇ ಸಂಬೋಧಿಸುತ್ತಿದ್ದರು. ಸುಂದರ್ಗೆ ಚೆಂಡನ್ನು ಹೇಗೆ ಎಸೆಯಬೇಕೆಂದು ತಮಿಳಿನಲ್ಲಿ ಹೇಳುತ್ತಿರುವ ಕೆಎಲ್ ರಾಹುಲ್ ಧ್ವನಿ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
ಇದನ್ನು ಕೇಳಿದ ಕಾಮೆಂಟೇಟರ್ ವರುಣ್ ಆರೋನ್, ಸುಂದರ್ ಜೊತೆ ಕೆಎಲ್ ರಾಹುಲ್ ತಮಿಳಿನಲ್ಲಿ ಮಾತನಾಡಬೇಕಾಗುತ್ತದೆ. ಇದರಿಂದ ಅವರಿಗೆ ಬೇಗ ಅರ್ಥವಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಸಹ ಕಾಮೆಂಟೇಟರ್ ಆಗಿದ್ದ ಸಂಜಯ್ ಬಂಗಾರ್ಗೆ ಕೆಎಲ್ ರಾಹುಲ್ ಸುಂದರ್ ಜೊತೆ ತಮಿಳಿನಲ್ಲಿ ಮಾತನಾಡುತ್ತಿರುವುದರಿಂದ ಹೆಚ್ಚು ಸಹಕಾರಿಯಾಗುತ್ತಿದೆಯಲ್ಲವೇ ಎಂದು ವರುಣ್ ಆರೋನ್ ಪ್ರಶ್ನಿಸಿದ್ದಾರೆ.
ವರುಣ್ ಆರೋನ್ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಬಂಗಾರ್, ನಾನು ರಾಷ್ಟ್ರ ಭಾಷೆಯನ್ನು ನಂಬುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿರುವ ಅವರು, ಹಿಂದಿ ರಾಷ್ಟ್ರ ಭಾಷೆ ಎಂದು ಪರೀಕ್ಷವಾಗಿ ಹೇಳಿರುವುದು ಸ್ಪಷ್ಟವಾಗಿದೆ.
ಈ ಹಿಂದೆ 2010 ರಲ್ಲಿ ಗುಜರಾತ್ ಹೈಕೋರ್ಟ್, ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಲು ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ರಾಷ್ಟ್ರಭಾಷೆ ಮೇಲೆ ನಂಬಿಕೆಯಿದೆ ಎಂದು ಲೈವ್ ಕಾಮೆಂಟ್ರಿಯಲ್ಲಿ ಹೇಳುವ ಮೂಲಕ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.