ಮುಂಬೈ, ಜ. 10 (DaijiworldNews/TA): ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 4ರ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಈ ಸಂತಸದ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ಆರ್ಸಿಬಿ ತಂಡದ ಪ್ರಮುಖ ವೇಗಿ ಪೂಜಾ ವಸ್ತ್ರಾಕರ್ ಗಾಯಗೊಂಡಿದ್ದು, ಈ ಗಾಯದ ಕಾರಣ ಅವರು ಕನಿಷ್ಠ ಎರಡು ವಾರಗಳ ಕಾಲ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲಿದ್ದಾರೆ. ಇದರ ಪರಿಣಾಮವಾಗಿ ಆರ್ಸಿಬಿ ತಂಡದ ಮುಂದಿನ ಐದು ಪಂದ್ಯಗಳಲ್ಲಿ ಪೂಜಾ ವಸ್ತ್ರಾಕರ್ ಕಣಕ್ಕಿಳಿಯುವುದು ಅನುಮಾನವಾಗಿದೆ.
ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪೂಜಾ ವಸ್ತ್ರಾಕರ್ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದು, ಇದರಿಂದಾಗಿ ಅವರು ತಾತ್ಕಾಲಿಕವಾಗಿ ಮೈದಾನದಿಂದ ದೂರ ಉಳಿಯಬೇಕಾಗಿದೆ. ಆರ್ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೂಜಾ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.
ಗಮನಾರ್ಹವಾಗಿ, ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಪೂಜಾ ವಸ್ತ್ರಾಕರ್ ಹೊರಗುಳಿದಿದ್ದರಿಂದ ಆರ್ಸಿಬಿ ತಂಡ ಇಂಗ್ಲೆಂಡ್ ವೇಗಿ ಲಿನ್ಸೆ ಸ್ಮಿತ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿತ್ತು. ಆದರೆ ಸ್ಮಿತ್ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಈ ಪಂದ್ಯದಲ್ಲಿ ಎರಡು ಓವರ್ಗಳನ್ನು ಎಸೆದ ಅವರು 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಇದೀಗ ಪೂಜಾ ಅವರ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ ಹಾಗೂ ಸಯಾಲಿ ಸತ್ಗರೆ ಸೇರಿದಂತೆ ಪ್ರಮುಖ ಆಟಗಾರರು ಇದ್ದಾರೆ.
ಪೂಜಾ ವಸ್ತ್ರಾಕರ್ ಶೀಘ್ರ ಚೇತರಿಸಿಕೊಂಡು ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಆರ್ಸಿಬಿ, ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.