ಢಾಕಾ, ಜ. 05 (DaijiworldNews/AK): ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನ ಐಪಿಎಲ್ನಿಂದ ಹೊರ ಹಾಕಿದ ಬಳಿಕ ಬಾಂಗ್ಲಾದೇಶ ಹೊಸ ಕ್ಯಾತೆ ಶುರು ಮಾಡಿದೆ. ತನ್ನ ದೇಶಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರ ನಿಷೇಧಿಸುವಂತೆ ಆದೇಶ ಹೊರಡಿಸಿದೆ.

ಅನಿರ್ದಿಷ್ಟಾವಧಿವರೆಗೆ ಐಪಿಎಲ್ ಪ್ರಸಾರ ನಿಷೇಧಿಸುವಂತೆ ಬಾಂಗ್ಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಟಿವಿ ಚಾನೆಲ್ಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಸಿಸಿಐ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಮುಸ್ತಾಫಿಜುರ್ ರೆಹಮಾನ್ ಅವರನ್ನ ಐಪಿಎಲ್ನಿಂದ ಹೊರಗೆ ಕಳಿಸಿದ್ದು, ದೇಶದ ಜನರಿಗೆ ಅತೀವ ನೋವುಂಟು ಮಾಡಿದೆ. ಹೀಗಾಗಿ 2026 ರ ಮಾರ್ಚ್ 26 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪ್ರಸಾರ ನಿಲ್ಲಿಸಲಾಗುತ್ತಿದೆ ಎಂಧು ಸಚಿವಾಲಯ ಹೇಳಿದೆ.
ಮುಂದಿನ ಸೂಚನೆ ಬರುವವರೆಗೆ ಐಪಿಎಲ್ನ ಎಲ್ಲಾ ಪಂದ್ಯಗಳು ಹಾಗೂ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಿಸಿಸಿಐ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ. ಆದ್ರೆ ರೆಹಮಾನ್ ವಿಚಾರದಲ್ಲಿ ಕೈಗೊಂಡ ನಿರ್ಧಾರವು ಬಾಂಗ್ಲಾ ವಿರೋಧಿ ಭಾವನೆಗೆ ಪುಷ್ಠಿ ಕೊಟ್ಟಂತಾಗಿದೆ ಎನ್ನುವುದು ಬಾಂಗ್ಲಾದ ಆರೋಪ.