ಮುಂಬೈ,ಸೆ. 08 (DaijiworldNews/AK):ಪಂಜಾಬ್ ಕಿಂಗ್ಸ್ ತಂಡದಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಮಾಜಿ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಅಸಮಾಧಾನ ಹೊರಹಾಕಿದ್ದಾರೆ.

ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಗೇಲ್, ಗೌರವದಿಂದ ನನ್ನನ್ನು ತಂಡ ನಡೆಸಿಕೊಂಡಿರಲಿಲ್ಲ. ನನ್ನನ್ನು ಸಣ್ಣ ಮಕ್ಕಳಂತೆ ನಡೆಸಿಕೊಂಡಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗುವ ಸ್ಥಿತಿ ತಲುಪಿದ್ದೆ ಎಂದು ತಿಳಿಸಿದರು.
ಪಂಜಾಬ್ ಕಿಂಗ್ಸ್ ತಂಡದಲ್ಲಿ ನನ್ನ ಐಪಿಎಲ್ ಜೀವನ ಬಹಳ ಬೇಗ ಕೊನೆಯಾಯಿತು. ನಾನು ತಂಡಕ್ಕೆ ಕೊಡುಗೆ ನೀಡಿದ್ದರೂ ಹಿರಿಯ ಆಟಗಾರನಾಗಿ ಕೊಡಬೇಕಾದ ಗೌರವ ಸಿಗಲಿಲ್ಲ. ಅನಿಲ್ ಕುಂಬ್ಳೆ ಅವರ ಜೊತೆ ಮಾತನಾಡುವಾಗ ನಾನು ಅತ್ತಿದ್ದೆ. ತಂಡ ನನ್ನನ್ನು ನಡೆಸಿಕೊಂಡ ರೀತಿಯಿಂದ ನಿರಾಸೆಯಾಗಿತ್ತು ಎಂದು ದೂರಿದರು.
ಕೆಎಲ್ ರಾಹುಲ್ ಅವರು ಕರೆ ಮಾಡಿ ಕ್ರಿಸ್ ಇರು ಮುಂದಿನ ಪಂದ್ಯದಲ್ಲಿ ಅವಕಾಶ ಸಿಗಲಿದೆ ಎಂದು ಹೇಳಿದರು. ಇದಕ್ಕೆ ನಾನು, ನಿಮಗೆ ಒಳ್ಳೆಯದಾಗಿ ಎಂದು ಹೇಳಿ ಬ್ಯಾಗ್ ಹಿಡಿದು ಹೊರಟೆ ಎಂದು ಹಳೆಯ ನೆನಪನ್ನು ಬಿಚ್ಚಿಟ್ಟರು.
ಕ್ರಿಸ್ ಗೇಲ್ ಅವರು ಐಪಿಎಲ್ನಲ್ಲಿ 2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರರಾಗಿ 41 ಪಂದ್ಯಗಳಲ್ಲಿ 40.75 ಸರಾಸರಿಯಲ್ಲಿ 1,304 ರನ್ ಹೊಡೆದಿದ್ದರು. ಇದರಲ್ಲಿ 1 ಶತಕ ಮತ್ತು ಹನ್ನೊಂದು ಅರ್ಧ ಶತಕಗಳಿದ್ದವು. ಅವರ ಸ್ಟ್ರೈಕ್ ರೇಟ್ 148.65 ಆಗಿದ್ದರೂ ತಂಡದ ಮ್ಯಾನೇಜ್ ಮೆಂಟ್ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದಿದ್ದಾರೆ.