ಮುಂಬೈ, ಜೂ. 04 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಚಾಂಪಿಯನ್ ಪಟ್ಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಲಂಕರಿಸಿದೆ. ಆದರೆ ಪಂಜಾಬ್ ಕಿಂಗ್ಸ್ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಂಕರಿಸಬೇಕೆಂದು ಬಯಸಿದವರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು.

ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೆಹ್ವಾಗ್, ಈ ಬಾರಿ ನಾನು ಪಂಜಾಬ್ ಕಿಂಗ್ಸ್ ತಂಡ ಗೆಲ್ಲಬೇಕೆಂದು ಬಯಸುತ್ತೇನೆ. ಅದಕ್ಕಾಗಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದರು.
ಸೆಹ್ವಾಗ್ ಈ ರೀತಿ ಹೇಳಿಕೆ ನೀಡಲು ಮುಖ್ಯ ಕಾರಣ, ಅವರು ಈ ಬಾರಿ ಬೆಂಬಲಿಸಿದ ತಂಡಗಳು ಸೋಲನುಭವಿಸಿರುವುದು. ಹೀಗಾಗಿ ಅವರು ಫೈನಲ್ ಪಂದ್ಯದಲ್ಲಿ ನನ್ನ ಬೆಂಬಲ ಆರ್ಸಿಬಿ ತಂಡಕ್ಕೆ ಎಂದಿದ್ದರು. ಆದರೆ ಇದೀಗ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.
ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡ ಗೆಲ್ಲಲಿದೆ ಎಂದಿದ್ದರು. ಆದರೆ ಗೆದ್ದಿದ್ದು ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಗೆಲ್ಲಲಿದೆ ಎಂದು ತಿಳಿಸಿದ್ದರು. ಆದರೆ ಗೆದ್ದಿದ್ದು ಮುಂಬೈ ಇಂಡಿಯನ್ಸ್ ತಂಡ.
ಇನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಹ್ವಾಗ್ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿದೆ ಎಂದಿದ್ದರು. ಆದರೆ ಗೆದ್ದಿದ್ದು ಪಂಜಾಬ್ ಕಿಂಗ್ಸ್. ಹೀಗಾಗಿ ತಾನು ನುಡಿದ ಭವಿಷ್ಯವೆಲ್ಲವೂ ಉಲ್ಟಾ ಆದ ಕಾರಣ ಅವರು ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲಿದೆ. ಆದರೆ ನನಗೆ ಗೆಲ್ಲಬೇಕಿರುವುದು ಪಂಜಾಬ್ ಕಿಂಗ್ಸ್ ತಂಡ. ಹೀಗಾಗಿ ನಾನು ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ. ನಾನು ಬೆಂಬಲಿಸಿದ ತಂಡ ಸೋಲುವ ಕಾರಣ, ಅದೇ ಟ್ರೆಂಡ್ ಅನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು.
ಆದರೆ ಫೈನಲ್ ಪಂದ್ಯದ ಬಗ್ಗೆ ವೀರೇಂದ್ರ ಸೆಹ್ವಾಗ್ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಇದೇ ಮೊದಲ ಬಾರಿಗೆ ಅವರು ಗೆಲ್ಲಲಿ ಎಂದು ಹೇಳಿದ ತಂಡವೇ ಗೆದ್ದಿದೆ. ಅದರಂತೆ ಆರ್ಸಿಬಿ ತಂಡ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.