ಬೆಂಗಳೂರು, ಡಿ.03 (DaijiworldNews/PY): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಲೇವಡಿಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ನೀವು ಜೆಡಿಎಸ್ ಜೊತೆ ಲಾಭದ ಆಟ ಆಡಿಲ್ಲವೇ ಸಿದ್ದರಾಮಯ್ಯ? ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚಿಸಿದ್ದು ಭಾಯಿ ಭಾಯಿ ಅಲ್ಲವೇ? ನೀವೇ ಸಿಎಂ ಆಗಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಜೊತೆ ಯಾವ ಆಟ ಆಡಿದ್ದು? ರಾಜ್ಯ ಕಂಡ ಅನುಕೂಲ ಸಿಂಧು ರಾಜಕಾರಣಿ ಅಂತಿದ್ದರೆ, ಅದು ಸಿದ್ದರಾಮಯ್ಯ" ಎಂದು ವ್ಯಂಗ್ಯವಾಡಿದೆ.
"ಲಾಭ ಇಲ್ಲದೇ ನೀವು ಏನನ್ನಾದರೂ ಮಾಡಿದ್ದೀರಾ? ಅಹಿಂದ ಚಳವಳಿ ಹುಟ್ಟು ಹಾಕಿದ್ದು, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದು, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಪರಮೇಶ್ವರ್ ಅವರನ್ನು ಸೋಲಿಸಿದ್ದು, ನೀವು ಮಾಡಿದ್ದೆಲ್ಲವೂ ಲಾಭಕ್ಕಾಗಿಯೇ" ಎಂದಿದೆ.
"ಸಿದ್ದರಾಮಯ್ಯನವರೇ, ನಿಮ್ಮ ಮಾತಿನ ಧ್ವನಿ ಹೇಗಿದೆಯೆಂದರೆ ಜೀವನದ ಉದ್ದಕ್ಕೂ ನೀವು ನಿಸ್ವಾರ್ಥ ಸೇವೆಯಲ್ಲೇ ಕಾಲ ಕಳೆದಂತೆ ಇದೆ. ಆದರೆ ವಾಸ್ತವ ಬೇರೆಯೇ ಇದೆ. ನೀವೆಷ್ಟು ಸ್ವಾರ್ಥ ರಾಜಕಾರಣಿ ಎಂಬುದಕ್ಕೆ ನಿದರ್ಶನಗಳು ಹತ್ತಾರಿವೆ. ಲಾಭವಿಲ್ಲದೆ ನೀವು ಯಾವುದೇ ಕೆಲಸವನ್ನೂ ಮಾಡಿಲ್ಲ" ಎಂದು ಆರೋಪಿಸಿದೆ.
"ಸಿದ್ದರಾಮಯ್ಯನವರೇ, ನಿಮ್ಮದು ನಿಜಕ್ಕೂ ನಿಸ್ವಾರ್ಥ ಸೇವೆ ಎಂದಾದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಅಧಿಕಾರ ಬೇಡ ಎಂದು ಘೋಷಿಸಿ, ದಲಿತರೇ ಮುಂದಿನ ಸಿಎಂ ಎಂದು ಘೋಷಿಸಿ, ಡಿಕೆಶಿಗೆ ಯಾವುದೇ ರಾಜಕೀಯ ಕಿರುಕುಳ ನೀಡುವುದಿಲ್ಲ ಭರವಸೆ ನೀಡಿ, ಆಗ ನಿಮ್ಮ ಲಾಭವಿಲ್ಲದ ರಾಜಕೀಯ ಮುಖವನ್ನು ಒಪ್ಪುತ್ತೇವೆ" ಎಂದು ಹೇಳಿದೆ.