ಬೆಂಗಳೂರು, ಮಾ 27 (DaijiworldNews/MS): ಸಿಡಿ ಪ್ರಕರಣದಲ್ಲಿ "ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ " ಎಂದು ಪ್ರಶ್ನೆ ಮಾಡಿರುವ ಕರ್ನಾಟಕ ಬಿಜೆಪಿ ಕಾಂಗ್ರೆಸ್ನ ನಾಯಕರನ್ನು ಕೆಣಕಿದೆ.
  
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, " ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲುಮುಟ್ಟಿ ನೋಡಿಕೊಂಡಿದ್ದಲ್ಲವೇ!? ಮಹಾನಾಯಕರೇ, ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ಗಳೊಂದಿಗೆ ಅದೂ ಈ ಪ್ರಕರಣದ ಬಳಿಕ ಸಂಬಂಧ ಹೊಂದಿರಲು ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು " ಆರಂಭದಲ್ಲಿ ಹೆಗಲು ಮುಟ್ಟಿಕೊಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ.
ಈಗ ಸಂತ್ರಸ್ಥೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಮನೆಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ, ಎಂದು ಕಾಲೆಳೆದಿದೆ.
ಇದಲ್ಲದೆ ಪ್ರಕರಣದ ಆರೋಪಿಗಳೊಂದಿಗೆ ಸಂಬಂಧವಿರುವುದನ್ನು ಮಹಾನಾಯಕ ಒಪ್ಪಿಕೊಂಡಿದ್ದಾರೆ.ಪ್ರಕರಣದ ಮಾಸ್ಟರ್ ಮೈಂಡ್ಗಳೊಂದಿಗೆ ಯಾವ ರೀತಿಯ ಸಂಬಂಧವಿತ್ತೆಂಬುದನ್ನು ರಾಜ್ಯದ ಜನತೆಯ ಮುಂದೆ ಖಳನಾಯಕ ಬಹಿರಂಗಪಡಿಸಬೇಕು. ಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ.