ಪುದುಚೇರಿ, ಫೆ.19 (DaijiworldNews/HR): "ಪುದುಚೇರಿಯಲ್ಲಿ ಇನ್ನು ಕೂಡ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದು, ವಿ.ನಾರಾಯಣಸ್ವಾಮಿ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ವೇಳೆ ಸೋಲಾಗಲಿದೆ" ಎಂದು ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ರಾಜೀನಾಮೆ ನೀಡಿರುವ ನಾಲ್ವರು ಶಾಸಕರ ಪೈಕಿ ಎ.ನಮಶಿವಾಯಂ ಹಾಗೂ ಇ ಥೀಪ್ಪೈನ್ತಾನ್ ಈಗಾಗಲೇ ಬಿಜೆಪಿ ಸೇರಿದ್ದು, ಇನ್ನಿಬ್ಬರು ಕಾಂಗ್ರೆಸ್ ಶಾಸಕರಾದ ಮಲ್ಲಾಡಿ ಕೃಷ್ಣ ರಾವ್ ಮತ್ತು ಎ. ಜಾನ್ ಕುಮಾರ್ ಸಹ ಬಿಜೆಪಿ ಸೇರಲಿದ್ದಾರೆ" ಎಂದರು.
ಇನ್ನು ಕಾಂಗ್ರೆಸ್ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ವೇಳೆ ಸೋಲಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಖಂಡಿತವಾಗಿಯೂ, ಶೇ 100ರಷ್ಟು ಕಾಂಗ್ರೆಸ್ ಸರ್ಕಾರ ಸೋಲುವುದು ಖಚಿತವಾಗಿದೆ" ಎಂದು ಹೇಳಿದ್ದಾರೆ.
ಫೆ. 22ರಂದು ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಡಾ. ತಮಿಳಿಸೈ ಸೌಂದರರಾಜನ್ ಅವರು ನಾರಾಯಣಸ್ವಾಮಿ ಸರ್ಕಾರಕ್ಕೆ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.