ಬೆಂಗಳೂರು, ಫೆ.11 (DaijiworldNews/MB) : ''ಮೃತರಾದ ಕೊರೊನಾ ವಾರಿಯರ್ಸ್ಗೆ ಸರ್ಕಾರ ವಿಮೆ ಪಾವತಿಸದಿರುವದು ಹೇಯ ನಡವಳಿಕೆ'' ಎಂದು ಹೇಳಿರುವ ಕಾಂಗ್ರೆಸ್ ವರಿಷ್ಠ ದಿನೇಶ್ ಗುಂಡೂರಾವ್ ಅವರು, ''ಕೇಂದ್ರ ಸುಳ್ಳು ಘೋಷಣೆಯ ಯೋಜನೆ ತರುವುದು ಯಾವ ಪುರುಷಾರ್ಥಕ್ಕೆ'' ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಯೋಧರಿಗಾಗಿ ಕೇಂದ್ರ ಸರ್ಕಾರ 50 ಲಕ್ಷ ಮೊತ್ತದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ವಿಮಾ ಯೋಜನೆಯನ್ನು ಮಾರ್ಚ್ ೩೦ ರಂದು ಪ್ರಕಟಿಸಿದ್ದು ಇದನ್ನು ಹಲವು ವಿಭಾಗಗಳಿಗೆ ವಿಸ್ತರಿಸಿತ್ತು. ಆದರೆ ಬಳಿಕ ಪರಿಷ್ಕೃತ ಸುತ್ತೋಲೆ ಹೊರಡಿಸಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಮಾತ್ರ ಗರೀಬ್ ಕಲ್ಯಾಣ್ ವಿಮೆ ದೊರೆಯಲಿದೆ. ಇತರ ಸಿಬ್ಬಂದಿಗಳು ಸತ್ತರೆ ರಾಜ್ಯ ಸರ್ಕಾರ ವಿಮೆ ಮೊತ್ತ ನೀಡಬೇಕು ಎಂದು ಹೇಳಿತ್ತು. ಆದರೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಕೊರೊನಾ ವಾರಿಯರ್ಸ್ಗಳಿಗೆ ಒಂಬತ್ತು ತಿಂಗಳು ಕಳೆದರೂ ವಿಮೆ ಹಣ ಲಭಿಸಿಲ್ಲ. ಈ ಬಗ್ಗೆ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ಕಿಡಿಕಾರಿದ್ದಾರೆ.
''ಕೊರೊನಾ ಕಾರ್ಯದಲ್ಲಿ ತೊಡಗಿ ಮೃತರಾದ ಕೊರೊನಾ ವಾರಿಯರ್ಸ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಮೆ ಪಾವತಿಸದಿರುವದು ಹೇಯ ನಡವಳಿಕೆ. 'ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ'ಯ ಪ್ರಕಾರ ಕೇಂದ್ರ ಸರ್ಕಾರ ವಿಮೆ ನೀಡುವುದಾಗಿ ಘೋಷಿಸಿ ಈಗ ಹಿಂದೆ ಸರಿದಿದೆ. ಕೇಂದ್ರ ಇಂತಹ ಸುಳ್ಳು ಘೋಷಣೆಯ ಯೋಜನೆ ತರುವುದು ಯಾವ ಪುರುಷಾರ್ಥಕ್ಕೆ?'' ಎಂದು ಪ್ರಶ್ನಿಸಿದ್ದಾರೆ.
''ಮೃತ ಕೊರೋನಾ ವಾರಿಯರ್ಸ್ಗೆ ವಿಮೆ ನೀಡುವ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿ ಕೇಂದ್ರ ತನ್ನ ಜವಾಬ್ಧಾರಿಯಿಂದ ನುಣುಚಿಕೊಂಡಿದೆ. ಇತ್ತ ರಾಜ್ಯ ಸರ್ಕಾರವೂ ವಿಮೆ ಪಾವತಿಸಲು ನೂರಾರು ನೆಪ ಹುಡುಕುತ್ತಿದೆ. ಹಾಗಾದರೆ ಈ ಎರಡು ಸರ್ಕಾರಗಳ ದೃಷ್ಟಿಯಲ್ಲಿ ಕೋವಿಡ್ ರೋಗದ ವಿರುದ್ಧ ಹೋರಾಡಿ ಮೃತರಾದ ವಾರಿಯರ್ಸ್ ಜೀವಗಳಿಗೆ ಬೆಲೆಯೇ ಇಲ್ಲವೆ?'' ಎಂದು ಕೇಳಿದ್ದಾರೆ.