ನವದೆಹಲಿ, ಫೆ.02 (DaijiworldNews/PY): ವಿಪಕ್ಷಗಳಾದ ಟಿಎಂಸಿ, ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ಸದಸ್ಯರು ಮಂಗಳವಾರ ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿದ್ದು, ಸಭಾತ್ಯಾಗ ಮಾಡಿದರು.

ಸಾಂದರ್ಭಿಕ ಚಿತ್ರ
"ರಾಜ್ಯಸಭೆಯ ಇಂದಿನ ಕಾರ್ಯಕ್ರಮಪಟ್ಟಿಯನ್ನು ರದ್ದುಪಡಿಸಿ, ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯ ವಿಚಾರವಾಗಿ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು" ಎಂದು ವಿಪಕ್ಷಗಳು ಒತ್ತಾಯಿಸಿದ್ದು, ಇದಕ್ಕೆ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಹಾಗಾಗಿ ವಿಪಕ್ಷದ ಸದಸ್ಯರು ಕಲಾಪದಿಂದ ಹೊರನಡೆದರು.
267ರ ನಿಯಮದ ಪ್ರಕಾರ ದಿನದ ವ್ಯವಹಾರಗಳನ್ನು ರದ್ದುಪಡಿಸಬೇಕು. ಪ್ರತಿಭಟನಾನಿರತ ರೈತರ ವಿಚಾರವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ವಿಪಕ್ಷಗಳು ನೋಟಿಸ್ ನೀಡಿದ್ದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ, "ಈ ವಿಚಾರದ ಬಗ್ಗೆ ನನಗೆ ಹಲವು ವಿರೋಧ ಪಕ್ಷಗಳ ನಾಯಕರಿಂದ ನೋಟಿಸ್ ದೊರೆತಿದೆ. ಆದರೆ, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬಹುದು" ಎಂದಿದ್ದಾರೆ.
"ಮಂಗಳವಾರ ಲೋಕಸಭೆಯಲ್ಲಿ ನಿಲುವಳಿಯ ಬಗ್ಗೆ ಚರ್ಚೆ ಆರಂಭವಾಗಲಿದ್ದು, ಈ ಸಂಬಂಧ ಬುಧವಾರದಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರೈತರ ಮಧ್ಯೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಇದು ಮುಖ್ಯವಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬಹುದು" ಎಂದು ಹೇಳಿದ್ದಾರೆ.
ಆದರೆ, ವಿರೋಧ ಪಕ್ಷದ ಸದಸ್ಯರು ಸಭಾಧ್ಯಕ್ಷರ ಮಾತನ್ನು ಒಪ್ಪದೇ ಸಭಾತ್ಯಾಗ ಮಾಡಿದರು.