ನವದೆಹಲಿ, ಫೆ.02 (DaijiworldNews/MB) : ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆ ರೈತರು ದೆಹಲಿಗೆ ನುಗ್ಗದಂತೆ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಸೋಮವಾರ ಬಜೆಟ್ ಇದ್ದ ಕಾರಣ ದೆಹಲಿಯ ಗಡಿಯಲ್ಲಿ ಅಧಿಕ ಪೊಲೀಸರು ನಿಯೋಜನೆ ಮಾಡಲಾಗಿತ್ತು. ಈಗ ಕೆಲವೆಡೆ ಕಾಂಕ್ರಿಟ್ ಸುರಿದು ಕಬ್ಬಿಣದ ಸರಳುಗಳನ್ನು ಮತ್ತು ಮುಳ್ಳು ತಂತಿಗಳನ್ನು ಹಾಕಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ''ಸೇತುವೆಗಳನ್ನು ನಿರ್ಮಿಸಿ, ಗೋಡೆಗಳನ್ನಲ್ಲ'' ಎಂದು ಕೇಂದ್ರ ಸರ್ಕಾರಕ್ಕೆ ರಾಹುಲ್ ಕಿವಿಮಾತು ಹೇಳಿದ್ದಾರೆ. ಹಾಗೆಯೇ ರಾಹುಲ್ ದೆಹಲಿಯ ಕೆಲವೆಡೆ ರಸ್ತೆಯಲ್ಲಿ ಸರಳುಗಳನ್ನು ಇರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಸೋಮವಾರ ಬಜೆಟ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದ ರಾಹುಲ್, ''ಬಂಡವಾಳವನ್ನು ಜನರ ಕೈಗೆ ಒಪ್ಪಿಸುವುದನ್ನು ಮರೆತಿರುವ ಮೋದಿ ಸರ್ಕಾರವು ಭಾರತದ ಆಸ್ತಿಯನ್ನು ತನ್ನ ಬಂಡವಾಳಶಾಹಿ ಗೆಳೆಯರಿಗೆ ಹಸ್ತಾಂತರಿಸಲು ಯೋಜಿಸಿದೆ'' ಎಂದು ದೂರಿದ್ದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ಸುಮಾರು ಎರಡು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಎಲ್ಲವೂ ವಿಫಲವಾಗಿದೆ. ಗಣರಾಜ್ಯೋತ್ಸವದ ದಿನ ರೈತರು ನಡೆಸಿದ್ದ ಟ್ಯ್ರಾಕ್ಟರ್ ಪರೇಡ್ ವೇಳೆ ಹಿಂಸಾಚಾರ ನಡೆದಿದೆ. ಏತನ್ಮಧ್ಯೆ ಗಡಿಗಳಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಪೊಲೀಸರು ದೆಹಲಿ–ಗಾಜಿಯಾಬಾದ್ ರಾಷ್ಟ್ರೀಯ ಹೆದ್ದಾರಿ–24 ಅನ್ನು ಮುಚ್ಚಿದ್ದಾರೆ.
ಈ ನಡುವೆ ರೈತರು ಪ್ರತಿಭಟಿಸುತ್ತಿರುವ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' (ರಸ್ತೆ ಬಂದ್) ಘೋಷಿಸಿವೆ. ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.