ಚೆನ್ನೈ, ಜ.19 (DaijiworldNews/MB) : ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಡಬ್ಲ್ಯುಐಎ) ಅಧ್ಯಕ್ಷೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ವಿ ಶಾಂತಾ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಅವರು ಉಸಿರಾಟದ ಸಮಸ್ಯೆ ಹಾಗೂ ಎದೆ ನೋವಿನಿಂದ ಅವರು ಬಳಲುತ್ತಿದ್ದ ಹಿನ್ನೆಲೆ ಚೆನ್ನೈನ ಆಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಗಾಂಧಿ ನಗರದ ಹಳೆಯ ಕ್ಯಾನ್ಸರ್ ಸಂಸ್ಥೆಗೆ ಸ್ಥಳಾಂತರಿಸಲಾಗಿದ್ದು ಇಂದು ಸಂಜೆ 4.30 ಕ್ಕೆ ಬೆಸೆಂಟ್ ನಗರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವರಿಯಾಗಿದೆ.
ಮಾರ್ಚ್ 11, 1927 ರಂದು ಜನಿಸಿದ ಶಾಂತಾ ಅವರು, ಕ್ಯಾನ್ಸರ್ ಆರೈಕೆ ಕ್ಷೇತ್ರದಲ್ಲಿ ನೀಡಿದ ತನ್ನ ಕೊಡುಗೆಗಳಿಂದಾಗಿಯೇ ಜನಪ್ರಿಯರಾಗಿದ್ದಾರೆ. 1949 ರಲ್ಲಿ ಚೆನ್ನೈನ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು.
ಬಳಿಕ 1952 ರಲ್ಲಿ ಡಿಜಿಒ ಮತ್ತು 1955 ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿ ಮಾಡಿದರು. ಕ್ಯಾನ್ಸರ್ ಗುಣಪಡಿಸುವಿಕೆ, ತಡೆಗಟ್ಟುವಿಕೆ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ತಮ್ಮ ಜೀವನವನ್ನು ಅವರು ಮುಡಿಪಾಗಿರಿಸಿದರು.
ಹಿರಿಯ ಆಂಕೊಲಾಜಿಸ್ಟ್ ಆಗಿದ್ದ ಶಾಂತಾ ಅವರು ಪದ್ಮಭೂಷಣ, ಪದ್ಮಶ್ರೀ, ಪದ್ಮವಿಭೂಷಣ್, ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.