ಮುಂಬೈ,ಜ.18 (DaijiworldNews/HR): ರಿಪಬ್ಲಿಕ್ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಪಾರ್ಥೊ ದಾಸ್ಗುಪ್ತಾ ನಡುವೆ ನಡೆದ ವಾಟ್ಸ್ಆಪ್ ಸಂಭಾಷಣೆ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಎನ್ಸಿಪಿ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.

ಎನ್ಸಿಪಿ ಮುಖ್ಯ ವಕ್ತಾರ ಮಹೇಶ್ ತಪಾಸೆ ಅವರು ಬಾಲಾಕೋಟ್ ವಾಯುನೆಲೆ ಮೇಲಿನ ದಾಳಿಯ ಗುಪ್ತಚರ ಮಾಹಿತಿ ಸೋರಿಕೆಯಾಗಿತ್ತು ಎಂಬ ವಿಷಯವನ್ನು ಉಲ್ಲೇಖಿಸಿದ್ದು, ಟಿಆರ್ಪಿಗಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಬಳಸಲಾಗಿದೆ ಎಂಬ ವಿಷಯ ನಿಜಕ್ಕೂ ಅಫಾತಕಾರಿಯಾಗಿದೆ" ಎಂದರು.
ಇನ್ನು "ಈ ಸಂಬಂಧ ನಾನು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಮಂಗಳವಾರ ಭೇಟಿಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ಬಗ್ಗೆ ಸ್ಪಷ್ಟನೆ ಕೂಡ ಕೇಳಲಿದ್ಧೇನೆ" ಎಂದು ತಿಳಿಸಿದ್ದಾರೆ.
"ಅರ್ನಬ್ ಗೋಸ್ವಾಮಿಗೆ ಈ ರೀತಿಯ ಗೌಪ್ಯ ವಿಷಯ ಹೇಗೆ ಸಿಕ್ಕಿದೆ ಎಂಬುದೇ ದೊಡ್ಡ ಸವಾಲಾಗಿದ್ದು, ಗೃಹ ಸಚಿವಾಲಯವು ಈ ಬಗ್ಗೆ ಶೀಘ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.