ಕಾಸರಗೋಡು, ಜ. 07 (DaijiworldNews/SM): ಇಯರ್ ಫೋನ್ ಕೇಬಲ್ನಿಂದ ನವಜಾತ ಶಿಶುವಿನ ಕುತ್ತಿಗೆ ಬಿಗಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಹೆರಿಗೆಯಾದ ಮಾಹಿತಿ ಪತಿ ಹಾಗೂ ಮನೆಯವರಿಗೆ ಆಸ್ಪತ್ರೆಗೆ ತಲುಪಿದ ಬಳಿಕವಷ್ಟೇ ತಿಳಿದು ಬಂದಿತ್ತು. ಇಯರ್ ಫೋನ್ ಕೇಬಲ್ನಿಂದ ಕುತ್ತಿಗೆ ಬಿಗಿದು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಬಾಯ್ಬಿಟ್ಟಿದ್ದಾಳೆ. ಶಾಹಿನಾ ಈಕೆಯ ಪತಿ, ಪತಿಯ ಹಾಗೂ ಕುಟುಂಬಸ್ಥರನ್ನು ಇಂದು ಠಾಣೆಗೆ ಕರೆಸಿದ್ದ ಪೊಲೀಸರು ಶಾಹಿನಾಳನ್ನು ಬಂಧಿಸಿದ್ದಾರೆ.
ಮೊದಲ ಮಗುವಿಗೆ ಜನ್ಮ ನೀಡಿದ ಕೆಲ ತಿಂಗಳಲ್ಲೇ ಮತ್ತೆ ಗರ್ಭಿಣಿಯಾಗಿದ್ದಳು:
ಇನ್ನು ಮೊದಲ ಮಗುವಿನ ಜನನವಾದ ಕೆಲ ತಿಂಗಳಲ್ಲೇ ಶಾಹಿನಾ ಮತ್ತೆ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿದ್ದು, ಈಕೆ ಗರ್ಭಿಣಿಯಾಗಿರುವುದು ಆಕೆಯ ಪತಿ ಮತ್ತು ಕುಟುಂಬಸ್ಥರಿಗೆ ವಿಚಾರ ತಿಳಿದಿರಲಿಲ್ಲ. ಇದರಿಂದ ಡಿ.15ರಂದು ಮಗು ಹುಟ್ಟಿದ ಕೂಡಲೇ ಕೊಲೆ ಮಾಡಿರುವುದಾಗಿ ಈಕೆ ತಪ್ಪೊಪ್ಪಿಕೊಂಡಿದ್ದಾಳೆ.
ಗರ್ಭಿಣಿಯಾಗಿರುವ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ:
ಇನ್ನು ಗರ್ಭಿಣಿ ಎಂಬುವುದನ್ನು ಈಕೆ ಯಾರಲ್ಲೂ ಹೇಳಿರಲಿಲ್ಲ. ಮೊದಲ ಮಗುವಿಗೆ 1 ವರ್ಷ ಮೂರು ತಿಂಗಳಾಗಿದ್ದು, ಇಷ್ಟು ಬೇಗ ಮತ್ತೆ ಗರ್ಭಿಣಿಯಾಗಿರುವ ಬಗ್ಗೆ ಮನೆಯವರು ಹಾಗೂ ಉಳಿದವರು ಅವಹೇಳನ ಮಾಡುವ ಭಯದಿಂದ ಇದನ್ನು ಮುಚ್ಚಿಟ್ಟಿದ್ದೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಕೊಂದು ಬೇರೆಲ್ಲಿಯಾದರೂ ಎಸೆಯಲು ತೀರ್ಮಾನಿಸಿ ಮಂಚದಡಿಯಲ್ಲಿ ಬಚ್ಚಿಟ್ಟಿದ್ದು, ಆದರೆ ರಕ್ತಸ್ರಾವ ಉಂಟಾದ ಹಿನ್ನಲೆಯಲ್ಲಿ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದರಿಂದ ಈಕೆಯ ಕೃತ್ಯ ಬೆಳಕಿಗೆ ಬರುವಂತಾಯಿತು.