ಕೋಲ್ಕತ್ತ, ಜ. 07 (DaijiworldNews/MB) : ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ವುಡ್ಲ್ಯಾಂಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಶನಿವಾರ ಗಂಗೂಲಿ ಅವರಿಗೆ ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತವಾಗಿದ್ದು ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ಗಳು ಕಂಡುಬಂದ ಹಿನ್ನೆಲೆ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿತ್ತು.
ಈ ಹಿನ್ನೆಲೆ ಜ. 5 ರಂದು ಮಾಹಿತಿ ನೀಡಿದ್ದ ವುಡ್ಲ್ಯಾಂಡ್ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ ಬಸು ಅವರು, ''ಬುಧವಾರ ಗಂಗೂಲಿಯವರು ಬಿಡುಗಡೆಯಾಗಲಿದ್ದು ಬಳಿಕ ಮನೆಯಲ್ಲಿಯೇ ವೈದರ ನಿಗಾದಲ್ಲಿ ಇರಲಿದ್ದಾರೆ. 2-3 ವಾರಗಳ ಬಳಿಕ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆ ನಡೆಯಲಿದೆ'' ಎಂದು ತಿಳಿಸಿದ್ದರು.
ಆದರೆ ಅವರನ್ನು ಮತ್ತೊಂದು ದಿನ ಆಸ್ಪತ್ರೆಯಲ್ಲಿಯೇ ಇರಿಸಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೌರವ್ ಗಂಗೂಲಿಯವರು, "ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ" ಎಂದು ತಿಳಿಸಿದ್ದಾರೆ.