ಭೋಪಾಲ್, ಸೆ.19 (DaijiworldNews/TA): ಭಾರತದಲ್ಲಿ ಚಿರತೆಗಳ ಸಂತತಿ ವೃದ್ಧಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಪ್ರಾಜೆಕ್ಟ್ ಚೀತಾ’ ಯೋಜನೆಗೆ ಮತ್ತೊಂದು ಮಹತ್ವದ ಯಶಸ್ಸು ಸಿಕ್ಕಿದೆ. ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಚಿರತೆ ಮರಿಗಳು ಜನಿಸಿದ್ದು, ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಹೊಸ ಉತ್ತೇಜನ ನೀಡಿದೆ.

ಈ ಬಾರಿ ವಿಶೇಷವೆಂದರೆ, ನಾಲ್ಕು ಮರಿಗಳಿಗೆ ಜನ್ಮ ನೀಡಿರುವ ತಾಯಿ ಚಿರತೆ ವಿದೇಶದಿಂದ ಭಾರತಕ್ಕೆ ತರಿಸಲಾದ ಚಿರತೆಯಲ್ಲ. ಅದು ‘ಪ್ರಾಜೆಕ್ಟ್ ಚೀತಾ’ ಯೋಜನೆಯಡಿ ಭಾರತದಲ್ಲೇ ಜನಿಸಿದ ಚಿರತೆ ಎಂಬುದು ಗಮನಾರ್ಹ. ಭಾರತಕ್ಕೆ ಚಿರತೆಗಳನ್ನು ಮರುಪರಿಚಯಿಸುವ ಯೋಜನೆಯಡಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಚಿರತೆಗಳನ್ನು ಭಾರತಕ್ಕೆ ಕರೆತರಲಾಗಿತ್ತು. ಅವು ಕೂನೋದಲ್ಲಿ ಮರಿಗಳಿಗೆ ಜನ್ಮ ನೀಡುವ ಮೂಲಕ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಗೆ ಮುನ್ನಡೆ ನೀಡಿದ್ದವು.
ಇದೀಗ ಭಾರತದಲ್ಲೇ ಹುಟ್ಟಿ ಬೆಳೆದ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ದೇಶದಲ್ಲಿ ಚಿರತೆಗಳ ಸಂತತಿ ಸ್ವಾಭಾವಿಕವಾಗಿ ವೃದ್ಧಿಯಾಗುತ್ತಿರುವುದಕ್ಕೆ ಇದು ಪ್ರಮುಖ ಸೂಚನೆಯಾಗಿದೆ. ನಾಲ್ಕು ಹೊಸ ಮರಿಗಳ ಜನನದೊಂದಿಗೆ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ ಚಿರತೆಗಳ ಸಂತತಿಯನ್ನು ಸ್ಥಿರವಾಗಿ ಬೆಳೆಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಈ ಬೆಳವಣಿಗೆ ಮತ್ತಷ್ಟು ಬಲ ನೀಡಿದೆ. ಚಿರತೆಗಳ ಸಂತತಿ ವೃದ್ಧಿಯಾಗುತ್ತಿರುವುದು ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ಅವುಗಳಿಗೆ ಅನುಕೂಲಕರ ಪರಿಸರ ನಿರ್ಮಾಣವಾಗುತ್ತಿರುವುದರ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಯಶಸ್ಸಿಗೆ ಇದು ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.