ಬೆಂಗಳೂರು, ಸೆ.18 (DaijiworldNews/AA): ಎಚ್ಎಎಲ್ ನಿರ್ಮಿತ ಲಘು ಯುದ್ಧ ವಿಮಾನ ಹಾಗೂ ನಾಗರಿಕ ಹೆಲಿಕಾಪ್ಟರ್ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನಲ್ಲಿಂದು ಭಾರತೀಯ ವಾಯುಪಡೆ ಮತ್ತು ಪವನ್ ಹನ್ಸ್ ಸಂಸ್ಥೆಗೆ ಹಸ್ತಾಂತರಿಸಿದರು.

ಎರಡು ತೇಜಸ್ ತರಬೇತಿ ವಿಮಾನಗಳು ಹಾಗೂ ಮೊದಲ ಎಫ್ಟಿಟಿ 40 ತರಬೇತಿ ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು. ಇದೇ ವೇಳೆ, ದ್ರುವ್ ಎನ್ ಜಿ ಹೆಲಿಕಾಪ್ಟರ್ಗಳನ್ನು ಪವನ್ ಹನ್ಸ್ ಸಂಸ್ಥೆಗೆ ನೀಡಿದರು. ನಾಗರಿಕ ವಿಮಾನಯಾನ ವಲಯಕ್ಕೆ ಸೇರ್ಪಡೆಯಾಗುತ್ತಿರುವ ದ್ರುವ್ ಎನ್ಜಿ, ಎ.ಎಸ್-4 ನಿಯಮಾವಳಿಗಳಿಗೆ ಅನುಗುಣವಾಗಿ ಭಾರತದಲ್ಲೇ ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡ ಮೊದಲ ನಾಗರಿಕ ಹೆಲಿಕಾಪ್ಟರ್ ಆಗಿದೆ.
ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಈ ಸಾಧನೆ, ಭಾರತದ ಏರೋಸ್ಪೇಸ್ ಕ್ಷೇತ್ರದಲ್ಲಿನ ತಾಂತ್ರಿಕ ಹಾಗೂ ಆತ್ಮನಿರ್ಭರತೆಯ ಜೊತೆಗೆ ಪ್ರಗತಿಪಥದ ಮಹತ್ವದ ಮೈಲಿಗಲ್ಲು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆತ್ಮನಿರ್ಭರ ಭಾರತದ ಮೂಲ ಮಂತ್ರದ ಮೂಲಕ ಈ ಸಾಧನೆ ಮಾಡಲಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಯುದ್ಧ ತಂತ್ರಜ್ಞಾನ ಬದಲಾಗುತ್ತಿದ್ದು, ವಾಯುಪಡೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದರು. ಜೊತೆಗೆ ಈ ಲಘು ಯುದ್ಧ ವಿಮಾನ ಹಾಗೂ ನಾಗರಿಕ ಹೆಲಿಕಾಪ್ಟರ್ಗಳನ್ನು ನಿರ್ಮಿಸಿದ ತಂತ್ರಜ್ಞರಿಗೆ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.