ಭೋಪಾಲ್, ಸೆ.18 (DaijiworldNews/AK): ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಅವರು 36 ವರ್ಷಗಳ ನ್ಯಾಯಾಂಗ ಸೇವೆಯ ಬಳಿಕ ನಿವೃತ್ತರಾದ ದಿನವೇ ಸಮಾಜಮುಖಿ ನಿರ್ಧಾರಗಳನ್ನು ಘೋಷಿಸಿದ್ದಾರೆ.

ತಮ್ಮ ಜಿಪಿಎಫ್ನ 1.01 ಕೋಟಿ ರೂ.ಯನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಜಬಲ್ಪುರದಲ್ಲಿ ನಡೆದ ಹೈಕೋರ್ಟ್ನ ಫುಲ್ ಕೋರ್ಟ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಜಸ್ಟಿಸ್ ಸಿಂಗ್, ತಮ್ಮ ಜಿಪಿಎಫ್ನ 1.01 ಕೋಟಿ ರೂ.ಯನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಜೀವನದ ಸಂಪಾದನೆ ಮತ್ತು ಮರಣಾನಂತರ ತಮ್ಮ ದೇಹವನ್ನೂ ಸಮಾಜಕ್ಕೆ ಸಮರ್ಪಿಸುವ ಇಚ್ಛೆ ವ್ಯಕ್ತಪಡಿಸಿದರು.
ಜಸ್ಟಿಸ್ ಅವನೀಂದ್ರ ಕುಮಾರ್ ಸಿಂಗ್ ಹಾಗೂ ಅವರ ಪತ್ನಿ, ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಬಳಸುವ ಉದ್ದೇಶದಿಂದ ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆಯೇ ಈ ನೋಂದಣಿ ಮಾಡಿಸಿಕೊಂಡಿರುವುದಾಗಿ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ತಿಳಿಸಿದರು. ಜೀವನಪೂರ್ತಿ ನ್ಯಾಯಾಂಗ ಕರ್ತವ್ಯ ನಿರ್ವಹಿಸಿದ ದೇಹವು ಮುಂದಿನ ವೈದ್ಯರ ಜ್ಞಾನಾರ್ಜನೆಗೆ ಉಪಯೋಗವಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದ್ದಾರೆ.
ಜಸ್ಟಿಸ್ ಅವನೀಂದ್ರ ಕುಮಾರ್ ಸಿಂಗ್ ಅವರು 1990ರಲ್ಲಿ ಸಿವಿಲ್ ಜಡ್ಜ್ ಆಗಿ ನ್ಯಾಯಾಂಗ ಸೇವೆ ಆರಂಭಿಸಿದ್ದರು. ಬಳಿಕ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು ಮೇ 2023ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಬಳಿಕ ಸೆಪ್ಟೆಂಬರ್ 17 ರಂದು ನಿವೃತ್ತರಾದರು.