ನವದೆಹಲಿ, ಸೆ.14 (DaijiworldNews/AA): ನಟ ಸುಶಾಂತ್ ಸಿಂಗ್ ರಾಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಆದಿತ್ಯ ಠಾಕ್ರೆ ಹೆಸರು ಉಲ್ಲೇಖವಾಗಿದೆ.

ದಿಶಾ ಸಾಲಿಯಾನ್ ಅವರು 2020ರ ಜೂನ್ 8ರಂದು ಮುಂಬೈನ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದರು. ಪ್ರಕರಣವನ್ನು ಮುಂಬೈ ಪೊಲೀಸರು ಕೇವಲ 'ಆಕಸ್ಮಿಕ ಸಾವು ವರದಿ' ಎಂದು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಮುಂಬೈ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಗಂಭೀರ ವೈಫಲ್ಯಗಳು ಮತ್ತು ವ್ಯತ್ಯಾಸಗಳು ಕಂಡುಬಂದಿತ್ತು.
ಈ ಹಿನ್ನೆಲೆ ಬಾಂಬೆ ಹೈಕೋರ್ಟ್ ದಿಶಾ ಸಾಲಿಯಾನ್ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹೊಸದಾಗಿ ಎಫ್ಐಆರ್ ಹಾಕಿದೆ. ಎಫ್ಐಆರ್ನಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ನಟ ದಿನೋ ಮೊರಿಯಾ, ರಿಯಾ ಚಕ್ರವರ್ತಿ ಮೊದಲಾದವರ ಹೆಸರು ಉಲ್ಲೇಖವಾಗಿದೆ.
ಎರಡು ದಿನಗಳ ಹಿಂದೆ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ಸಿಬಿಐ ಮುಂದೆ ಹೇಳಿಕೆ ದಾಖಲಿಸಿದ್ದರು. ತಮ್ಮ ಹೇಳಿಕೆಯಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವು ಮಂದಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪ ಮಾಡಿದ್ದರು.
ಅಲ್ಲದೇ ಅಪರಾಧ ಸಂಚು, ಆತ್ಮಹತ್ಯೆ ಎಂಬ ತಪ್ಪು ನಿರೂಪಣೆಯನ್ನು ಸೃಷ್ಟಿಸಿ ಪ್ರಚಾರ ಮಾಡುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವುದು ಅಥವಾ ತಿರುಚಿರುವ ಆರೋಪಗಳ ಕುರಿತು ಹಲವರ ಪಾತ್ರವನ್ನು ತನಿಖೆ ಮಾಡಬೇಕಿದೆ ಎಂದು ಸತೀಶ್ ಸಾಲಿಯಾನ್ ಹೇಳಿಕೆ ನೀಡಿದ್ದರು.