ತುಮಕೂರು, ಆ. 29 (DaijiworldNews/AA): ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡೇ ಮಾಡುತ್ತೇವೆ. ವಾಲ್ಮೀಕಿ ನಿಗಮದ 187 ಕೋಟಿ ವಾಪಸ್ ಬರೋವರೆಗೂ ಹೋರಾಟ ಇದ್ದೆ ಇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು, "ಸೆಪ್ಟೆಂಬರ್ 1ರಿಂದ ಲಿಂಗಸೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಕುರಿತು ರಾಷ್ಟ್ರೀಯ ನಾಯಕರ ಬಳಿ ಇವತ್ತು ಚರ್ಚೆ ಮಾಡಿದ್ದೇನೆ. ಅವರೂ ಗ್ರೀನ್ ಸಿಗ್ನಲ್ ನೀಡಿದ್ದು, ಯಶಸ್ವಿಯಾಗಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ" ಎಂದರು.
"ಇವತ್ತು ಸಚಿವ ನಾಗೇಂದ್ರ ರಾಜೀನಾಮೆ ಕೊಡಲು ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಹೋರಾಟವೇ ಕಾರಣ. ಏಳು ದಿನಗಳ ಕಾಲ ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಹೋರಾಟ ಮಾಡಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದು ಎಲ್ಲವೂ ಪರಿಣಾಮಕಾರಿಯಾಗಿ ಆಗಿದೆ. ಹಾಗಾಗಿ ಅವರು ರಾಜೀನಾಮೆ ಕೊಡುವ ಪ್ರಸಂಗ ಬಂದಿದೆ. ನಮ್ಮ ಹೋರಾಟ ಒಬ್ಬ ವ್ಯಕ್ತಿ ವಿರುದ್ಧ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿತ್ತು. ದಲಿತರ ಹಣ ಲೂಟಿ ಮಾಡಿದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮಾಡಿದ್ದೇವೆ" ಎಂದು ತಿಳಿಸಿದರು.
"ಈ ಹೋರಾಟ ಇಲ್ಲಿಗೆ ಮುಗಿಯೋದಿಲ್ಲ. ವಾಲ್ಮೀಕಿ ನಿಗಮದ 187 ಕೋಟಿ ರೂ. ವಾಪಸ್ ಬರೋವರೆಗೂ ಮುಂದುವರಿಯಲಿದೆ. ನಾಗೇಂದ್ರ ಕೂಡ ಪಾದಯಾತ್ರೆ ಮಾಡುತ್ತೇನೆ ಅಂತಿದ್ದಾರೆ. ಪಾದಯಾತ್ರೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅವರೂ ಮಾಡಲಿ" ಎಂದು ಸವಾಲು ಹಾಕಿದರು.