ಮೈಸೂರು, ಆ. 28 (DaijiworldNews/TA): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆ ಇದೀಗ ಮೈಸೂರು ಅರಮನೆ ಪ್ರವೇಶಿಸಿದೆ.

ಜಯಮಾರ್ತಾಂಡ ದ್ವಾರ ಮೂಲಕ ಅರಮನೆ ಪ್ರವೇಶಿಸಿದ ಗಜಪಡೆಯನ್ನು ಅರಮನೆ ಮಂಡಳಿ ವತಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಗಜಪಡೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ದಸರಾ ಗಜಪಡೆಯ ಆಗಮನದ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಲಾ ತಂಡಗಳ ಪ್ರದರ್ಶನ, ಸಾಂಪ್ರದಾಯಿಕ ಸ್ವಾಗತ ಹಾಗೂ ಆನೆಗಳ ಭವ್ಯ ಪ್ರವೇಶ ಪ್ರವಾಸಿಗರು ಮತ್ತು ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀವತ್ಸ, ಜಿ.ಟಿ. ದೇವೇಗೌಡ, ಹರೀಶ್ ಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅರಣ್ಯಾಧಿಕಾರಿ ರವಿಶಂಕರ್, ಪ್ರಭುಗೌಡ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಗಜಪಡೆಯ ಸಿದ್ಧತೆಗಳು ಈಗ ಮತ್ತಷ್ಟು ಚುರುಕುಗೊಳ್ಳಲಿವೆ. ಆನೆಗಳಿಗೆ ವಿಶೇಷ ತರಬೇತಿ, ಆರೈಕೆ ಹಾಗೂ ದಸರಾ ಮೆರವಣಿಗೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಗಜಪಡೆ ಅರಮನೆ ಪ್ರವೇಶಿಸುವ ಮೂಲಕ ಮೈಸೂರು ದಸರಾ 2026ರ ಸಂಭ್ರಮಕ್ಕೆ ಅಧಿಕೃತವಾಗಿ ಕಳೆಗಟ್ಟಿದೆ.