ಅಂಬಾಲಾ, ಆ. 28 (DaijiworldNews/TA): ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ಪರೀಕ್ಷೆ ಎದುರಿಸುತ್ತಾರೆ. ಆದರೆ ನಿರಂತರ ವೈಫಲ್ಯಗಳ ನಡುವೆಯೂ ಗುರಿ ಬಿಡದೆ ಮುನ್ನಡೆದವರು ಮಾತ್ರ ಯಶಸ್ಸಿನ ಮೆಟ್ಟಿಲೇರುತ್ತಾರೆ.

ಇದಕ್ಕೆ ಹರಿಯಾಣದ ಅಂಬಾಲಾದ ಅಕೃತಿ ಸೇಥಿ ಅವರ ಕಥೆಯೇ ಉತ್ತಮ ಉದಾಹರಣೆ. ಯುಪಿಎಸ್ಸಿ ಪ್ರಿಲಿಮ್ಸ್ನಲ್ಲಿ ಸತತ ಐದು ಬಾರಿ ವಿಫಲರಾದರೂ, ಅವರು ತಮ್ಮ ಗುರಿಯನ್ನು ಕೈಬಿಡಲಿಲ್ಲ. ಕೊನೆಗೆ ಆರನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗಿ, 249ನೇ ಅಖಿಲ ಭಾರತ ರ್ಯಾಂಕ್ (AIR) ಪಡೆದು IAS ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು.
ಶಾಲಾ ಶಿಕ್ಷಣದ ಬಳಿಕ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಕೃತಿ, ನಂತರ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಆರಂಭದಲ್ಲಿ ನಾಗರಿಕ ಸೇವೆಗೆ ಸೇರುವ ಯಾವುದೇ ಯೋಜನೆ ಅವರಿಗಿರಲಿಲ್ಲ. ಆದರೆ ಕುಟುಂಬದ ಸಂಬಂಧಿಯೊಬ್ಬರೊಂದಿಗೆ ನಡೆದ ಮಾತುಕತೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ತಿಳಿದುಕೊಂಡ ಅವರು ಸಾರ್ವಜನಿಕ ಸೇವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ನಿರ್ಧಾರ ಕೈಗೊಂಡರು. ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಯುಪಿಎಸ್ಸಿ ತಯಾರಿಯಲ್ಲಿ ತೊಡಗಿಸಿಕೊಂಡರು.
2017ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅಕೃತಿಗೆ ಪ್ರಿಲಿಮ್ಸ್ ಹಂತ ದಾಟಲು ಸಾಧ್ಯವಾಗಲಿಲ್ಲ. ಉದ್ಯೋಗ ತೊರೆದು ಪರೀಕ್ಷಾ ತಯಾರಿಗೆ ಬಂದಿದ್ದರಿಂದ ಈ ಸೋಲು ಅವರಿಗೆ ದೊಡ್ಡ ಆಘಾತ ನೀಡಿತ್ತು. ಆದರೂ ಅವರು ಪ್ರಯತ್ನ ನಿಲ್ಲಿಸಲಿಲ್ಲ. ಮುಂದಿನ ವರ್ಷವೂ ಪರೀಕ್ಷೆ ಬರೆದರು. ಆದರೆ ಫಲಿತಾಂಶ ಮತ್ತೆ ನಿರಾಸೆ ಮೂಡಿಸಿತು. ಹೀಗೆ ಸತತ ಐದು ಪ್ರಯತ್ನಗಳಲ್ಲೂ ಪ್ರಿಲಿಮ್ಸ್ನಲ್ಲಿ ವಿಫಲರಾದರು. 2021ರ ವೇಳೆಗೆ ಐದು ಬಾರಿ ಸೋಲು ಕಂಡಿದ್ದರೂ, IAS ಆಗಬೇಕೆಂಬ ಅವರ ಕನಸು ಮಾತ್ರ ಕುಗ್ಗಲಿಲ್ಲ.
ಐದು ವೈಫಲ್ಯಗಳ ಬಳಿಕ ಅಕೃತಿ ತಮ್ಮ ತಯಾರಿ ತಂತ್ರವನ್ನೇ ಮರುಪರಿಶೀಲಿಸಿದರು. ಈ ಹಿಂದಿನ ಪ್ರಯತ್ನಗಳಲ್ಲಿ ಎಲ್ಲಿ ತಪ್ಪಾಯಿತು ಎಂಬುದನ್ನು ವಿಶ್ಲೇಷಿಸಿ, ಅಧ್ಯಯನದ ವಿಧಾನವನ್ನು ಬದಲಿಸಿಕೊಂಡರು. ಹೆಚ್ಚು ಶಿಸ್ತು ಮತ್ತು ಏಕಾಗ್ರತೆಯಿಂದ ಆರನೇ ಪ್ರಯತ್ನಕ್ಕೆ ಸಿದ್ಧರಾದರು.
ಅಂತಿಮವಾಗಿ 2022ರಲ್ಲಿ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾದ ಅವರು 249ನೇ ರ್ಯಾಂಕ್ ಪಡೆದರು. ಈ ಮೂಲಕ ಹಲವು ವರ್ಷಗಳ ಪರಿಶ್ರಮಕ್ಕೆ ಫಲ ದೊರೆತು IAS ಅಧಿಕಾರಿಯಾಗುವ ಅವರ ಕನಸು ನನಸಾಯಿತು. ಅಕೃತಿಯ ಯಶಸ್ಸಿನ ಹಿಂದೆ ಅವರ ಕುಟುಂಬದ ಬೆಂಬಲವೂ ಪ್ರಮುಖ ಪಾತ್ರ ವಹಿಸಿದೆ. ವಿಶೇಷವಾಗಿ ಅವರ ತಂದೆ ಪ್ರತಿ ಹಂತದಲ್ಲೂ ಅವರಿಗೆ ಪ್ರೋತ್ಸಾಹ ನೀಡಿದರು.
ಸತತ ವೈಫಲ್ಯಗಳ ಬಳಿಕ ಪ್ರಯತ್ನ ಕೈಬಿಡುವಂತೆ ಒತ್ತಡ ಹೇರುವ ಬದಲು, ಪ್ರತಿಯೊಂದು ಸೋಲನ್ನೂ ಒಂದು ಕಲಿಕೆಯ ಅವಕಾಶವಾಗಿ ಪರಿಗಣಿಸಿ ಮತ್ತಷ್ಟು ಪರಿಶ್ರಮಿಸುವಂತೆ ಅವರು ಮಗಳನ್ನು ಪ್ರೇರೇಪಿಸಿದರು. ಐದು ಸೋಲುಗಳ ಬಳಿಕ ಆರನೇ ಪ್ರಯತ್ನದಲ್ಲಿ ಯಶಸ್ಸು ಕಂಡ ಅಕೃತಿ ಸೇಥಿ ಅವರ ಪಯಣ, ವೈಫಲ್ಯ ಅಂತ್ಯವಲ್ಲ; ಗುರಿ ತಲುಪುವವರೆಗೆ ಪ್ರಯತ್ನ ಮುಂದುವರಿಸಿದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.