ಬೆಂಗಳೂರು, ಜು. 02 (DaijiworldNews/AK):ಬೆಳೆ ಬೆಳೆಯದಿರಿ ಎಂದು ಮುಖ್ಯಮಂತ್ರಿಗಳು ನೀಡಿದ ಹೇಳಿಕೆಯು ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಈ ನಾಡಿನ ದೊರೆ, ಮುಖ್ಯಮಂತ್ರಿಗಳು ಒಂದು ಹೇಳಿಕೆ ಕೊಟ್ಟಿದ್ದಾರೆ. ನೀರಿಲ್ಲ; ಬೆಳೆ ಬೆಳೆಯುವುದು ಬೇಡ. ಭೀಕರ ಬರಗಾಲದ ಮುನ್ಸೂಚನೆ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಬೆಳೆಯದಿರಿ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದು ಬಹಳ ಆಶ್ಚರ್ಯ ಮಾತ್ರವಲ್ಲದೇ ಅತ್ಯಂತ ನೋವನ್ನು ತಂದಿದೆ ಎಂದು ನುಡಿದರು.
ನಾವೇನೇ ಹೇಳಿಕೆ ನೀಡಿದರೂ ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ವಿನಂತಿಸಿದರು. ಇಡೀ ದೇಶದಲ್ಲಿ ಬರಗಾಲದ ಛಾಯೆ ಮೂಡಿದೆ. ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಅಭಯ, ಭರವಸೆಯನ್ನು ಸರಕಾರ ನೀಡಬೇಕಿತ್ತು. ಮುಂದಿನ 15- 20 ದಿನ ಮಳೆ ಬೀಳುವ ಆಶಾಭಾವ ಇದೆ. ಮುಖ್ಯಮಂತ್ರಿಗಳು ಹೇಳಿದರೆಂದು ಬಿತ್ತನೆಯೇ ಮಾಡದೇ ಇದ್ದರೆ ಯಾರು ಹೊಣೆಗಾರರು ಎಂದು ಕೇಳಿದರು.
ಶೇ 50- 60 ಮಳೆ ಕಡಿಮೆ ಇರುವಾಗ ರಾಜ್ಯ ಸರಕಾರದ ಆದ್ಯತೆ ಏನು? ಇವರೇನಾದರೂ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಸಂಬಂಧಿಸಿ ಅನುದಾನ ಬಿಡುಗಡೆ ಮಾಡಿದ್ದಾರಾ? ಬರಗಾಲದ ಮುನ್ಸೂಚನೆ ವಿಚಾರ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯೇ? ಯಾಕೆ ಈ ರೀತಿ ಕಪಟ ನಾಟಕ ಆಡುತ್ತಿದ್ದೀರಿ? ಎಂದು ಕೇಳಿದರು. ಮುಖ್ಯಮಂತ್ರಿ ರೈತಪರವಾಗಿಲ್ಲದೇ ರಿಯಲ್ ಎಸ್ಟೇಟ್ ಪರ ಆದರೆ ರಾಜ್ಯದ ಹಣೆಬರಹ ಇದೇ ಆಗುತ್ತದೆ ಎಂದು ಆಕ್ಷೇಪಿಸಿದರು. ನಮ್ಮ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ದುಸ್ಸಾಹಸಕ್ಕೆ ಯಾಕೆ ಕೈ ಹಾಕಿದ್ದೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದ ಅವರು, ರೈತರಿಗೆ ಕೊಡಬೇಕಾದ ಯೋಜನೆ, ಆಡಳಿತ ಸನ್ನದ್ಧತೆ ಕಡೆಗೆ ಗಮನಿಸದೇ ಮುಖ್ಯಮಂತ್ರಿಗಳು ಕೈಚೆಲ್ಲಿ ಕೂತರೆ ಹೇಗೆ ಎಂದು ಟೀಕಿಸಿದರು.
ಎಸ್ಐಆರ್ ಇರುವ ಕಾರಣ ಆಗಸ್ಟ್ ಮಧ್ಯದಲ್ಲಿ ಮುಂಗಾರು ಅಧಿವೇಶನ ಮಾಡುವುದಾಗಿ ಹೇಳಿದ್ದಾರೆ. ಶಾಸಕರು ಮನೆ ಮನೆಗೆ ತೆರಳಿ ಎಸ್ಐಆರ್ ಮಾಡುತ್ತಾರಾ ಎಂದು ಪ್ರಶ್ನೆ ಹಾಕಿದರು.
ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ತಿಳಿಸಿದರು. ಇದೇ ಕಾರಣಕ್ಕೆ ಅಧಿವೇಶನ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಪೂರ್ಣ ಸಂಪುಟ ಇದ್ದರೂ ನೆರೆ ಬಂದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ ಎಂದು ದೂರಿದರು.