ಬೆಂಗಳೂರು, ಜು. 03 (DaijiworldNews/TA): ಭಾರೀ ಮಳೆಗೆ ಮನೆಯಂಗಳದಲ್ಲಿದ್ದ ಮರ ನೆಲಕ್ಕುರುಳಿದ ಘಟನೆ, ಬೆಂಗಳೂರಿನ ಹಿರಿಯ ಉದ್ಯಮಿ ಎನ್.ಜಿ. ಕೇಸರಿ ಅವರ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆದಿದೆ. ಸುಮಾರು 40 ವರ್ಷಗಳ ಕಾಲ ಸಂರಕ್ಷಿಸಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಾನೂನುಬದ್ಧವಾಗಿ ಮಾರಾಟ ಮಾಡುವ ಮೂಲಕ ಅವರು ತೆರಿಗೆ ಹಾಗೂ ಇತರ ವೆಚ್ಚಗಳನ್ನು ಕಳೆದ ಬಳಿಕ ಸುಮಾರು ರೂ.28 ಲಕ್ಷ ನಿವ್ವಳ ಆದಾಯ ಗಳಿಸಿದ್ದಾರೆ. ಜೊತೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಸಂಸ್ಥೆಯಿಂದ ಪ್ರತಿಷ್ಠಿತ 'ಶ್ರೀಗಂಧ ಶಿರೋಮಣಿ' ಗೌರವಕ್ಕೂ ಭಾಜನರಾಗಿದ್ದಾರೆ.

ಸುಮಾರು ನಾಲ್ಕು ದಶಕಗಳ ಹಿಂದೆ ಮನೆಯಂಗಳದಲ್ಲಿ ಸಹಜವಾಗಿ ಮೊಳಕೆಯೊಡೆದ ಪುಟ್ಟ ಗಿಡವನ್ನು ಸಾಮಾನ್ಯ ಗಿಡದಂತೆ ಬೆಳೆಸಿದ ಕೇಸರಿ ಅವರಿಗೆ, ಬಳಿಕ ಅದು ಅಮೂಲ್ಯ ಶ್ರೀಗಂಧದ ಮರ ಎಂಬುದು ತಿಳಿಯಿತು. ಮರ ಬೆಳೆದಂತೆ ಅದರ ಮೇಲೆ ಕಳ್ಳರ ಕಣ್ಣೂ ಬಿದ್ದಿದ್ದು, ಹಲವು ಬಾರಿ ಕಳ್ಳತನದ ಯತ್ನಗಳು ನಡೆದಿದ್ದವು. ಇದರಿಂದ ಎಚ್ಚೆತ್ತ ಅವರು ಮರದ ಸುತ್ತ ಕಬ್ಬಿಣದ ಬೇಲಿ ನಿರ್ಮಿಸಿ ವರ್ಷಗಳ ಕಾಲ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದರು.
ಆದರೆ 2026ರ ಜೂನ್ನಲ್ಲಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಪಕ್ಕದಲ್ಲಿದ್ದ ಬೃಹತ್ ಮರ ಉರುಳಿ ಶ್ರೀಗಂಧದ ಮರದ ಮೇಲೆಯೇ ಬಿದ್ದ ಪರಿಣಾಮ, ಅಮೂಲ್ಯ ಮರ ನೆಲಕ್ಕುರುಳಿತು. ಮರ ಉರುಳಿದ ಬಳಿಕ ಅಕ್ರಮ ಮಾರ್ಗಗಳನ್ನು ಅನುಸರಿಸದೆ, ಕೇಸರಿ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಗತ್ಯ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು. ನಂತರ ಮೈಸೂರಿನ ಶ್ರೀಗಂಧ ಕೋಠಿಗೆ ಮರವನ್ನು ಸಾಗಿಸಿ ಗುಣಮಟ್ಟದ ಪ್ರಮಾಣಪತ್ರ ಪಡೆದರು. ಬಳಿಕ ಸರ್ಕಾರದ ಏಕಸ್ವಾಮ್ಯದ ಕೆಎಸ್ಡಿಎಲ್ ಸಂಸ್ಥೆಗೆ ಕಾನೂನುಬದ್ಧವಾಗಿ ಮಾರಾಟ ಮಾಡಿದರು.
ತೂಕ ಮಾಡಿದಾಗ ಮರ ಸುಮಾರು ಒಂದು ಟನ್ ಇದ್ದು, ಅದರ ಮಾರಾಟದಿಂದ ಎಲ್ಲಾ ತೆರಿಗೆ ಮತ್ತು ಸಾಗಣೆ ವೆಚ್ಚಗಳನ್ನು ಕಳೆದ ಬಳಿಕ ಸುಮಾರು ರೂ. 28 ಲಕ್ಷ ನಿವ್ವಳ ಆದಾಯ ಲಭಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ಕೆಎಸ್ಡಿಎಲ್ಗೆ ಎರಡನೇ ಅತಿ ಹೆಚ್ಚು ಮೌಲ್ಯದ ಶ್ರೀಗಂಧವನ್ನು ಪೂರೈಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೇಸರಿ ಪಾತ್ರರಾಗಿದ್ದಾರೆ.
ಶ್ರೀಗಂಧದ ಮೌಲ್ಯವು ಅದರ ಹಾರ್ಟ್ವುಡ್ ಮತ್ತು ಎಣ್ಣೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಗುಣಮಟ್ಟದ ಆಧಾರದ ಮೇಲೆ ಮರವನ್ನು ವಿವಿಧ ಗ್ರೇಡ್ಗಳಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಕೆ.ಜಿ.ಗೆ ರೂ.3,000ರಿಂದ ರೂ.15,000ವರೆಗೆ, ಅತ್ಯುತ್ತಮ ಗುಣಮಟ್ಟದ ಹಾರ್ಟ್ವುಡ್ಗೆ ರೂ.7,000ರಿಂದ ರೂ.22,000ಕ್ಕೂ ಅಧಿಕ ಬೆಲೆ ಸಿಗುತ್ತದೆ.
ಒಂದು ಟನ್ ಗುಣಮಟ್ಟದ ಶ್ರೀಗಂಧ ಮರದಿಂದ ತೆರಿಗೆ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಕಳೆದ ಬಳಿಕ ರೂ.20 ಲಕ್ಷದಿಂದ ರೂ.50 ಲಕ್ಷದವರೆಗೆ ಆದಾಯ ಗಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಶ್ರೀಗಂಧ ಕೃಷಿಯತ್ತ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ರಾಯಚೂರಿನ ಕವಿತಾ ಮಿಶ್ರಾ, ಕೊಪ್ಪಳದ ರಮೇಶ್ ಬಳೂಟಗಿ, ಹಾಸನದ ರಂಗಸ್ವಾಮಿ ಸೇರಿದಂತೆ ಹಲವು ರೈತರು ನೂರಾರು ಹಾಗೂ ಸಾವಿರಾರು ಶ್ರೀಗಂಧದ ಮರಗಳನ್ನು ಬೆಳೆಸುತ್ತಿದ್ದು, ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ತಜ್ಞರ ಪ್ರಕಾರ, ಸಮಗ್ರ ಕೃಷಿ ಪದ್ಧತಿಯೊಂದಿಗೆ 15ರಿಂದ 25 ವರ್ಷಗಳ ಕಾಲ ತಾಳ್ಮೆಯಿಂದ ಶ್ರೀಗಂಧವನ್ನು ಬೆಳೆಸಿದರೆ, ಇದು ದೀರ್ಘಾವಧಿಯ ಲಾಭದಾಯಕ ಹೂಡಿಕೆಯಾಗಬಹುದು.