ನವದೆಹಲಿ, ಜೂ. 26 (DaijiworldNews/TA): ಭಾರತದ ಪ್ರಮುಖ ಆಂತರಿಕ ಗುಪ್ತಚರ ಸಂಸ್ಥೆಯಾದ ಗುಪ್ತಚರ ಬ್ಯೂರೋ (ಐಬಿ)ಯ ಮುಂದಿನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಮಹೇಶ್ ದೀಕ್ಷಿತ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಸ್ತುತ ಐಬಿಯ ವಿಶೇಷ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ನಿರ್ಗಮಿತ ನಿರ್ದೇಶಕ ತಪನ್ ಕುಮಾರ್ ದೇಕಾ ಅವರ ಉತ್ತರಾಧಿಕಾರಿಯಾಗಿ ಎರಡು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ (ACC) ಈ ನೇಮಕಾತಿಗೆ ಅನುಮೋದನೆ ನೀಡಿದ್ದು, ಸಿಬ್ಬಂದಿ ಸಚಿವಾಲಯ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಸಚಿವಾಲಯದ ಆದೇಶದ ಪ್ರಕಾರ, ಮಹೇಶ್ ದೀಕ್ಷಿತ್ ಅವರಿಗೆ ಹುದ್ದೆ ವಹಿಸಿಕೊಳ್ಳಲು ಅಗತ್ಯವಾದ ಸೇವಾ ವಿಸ್ತರಣೆಯನ್ನೂ ನೀಡಲಾಗಿದೆ. ಅವರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಐಬಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಹೇಶ್ ದೀಕ್ಷಿತ್ 1993ರ ಬ್ಯಾಚ್ನ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರಿ. ದೇಶದ ಅತ್ಯಂತ ಅನುಭವಿ ಗುಪ್ತಚರ ಅಧಿಕಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಅವರು, ವೃತ್ತಿಯಲ್ಲಿ ವೈದ್ಯರಾಗಿದ್ದರೂ ಬಳಿಕ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾಗಿ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಭಯೋತ್ಪಾದನೆ ನಿಗ್ರಹ, ರಾಷ್ಟ್ರೀಯ ಭದ್ರತೆ ಹಾಗೂ ಗುಪ್ತಚರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹಲವು ಮಹತ್ವದ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ನವ ದೆಹಲಿಯಲ್ಲಿರುವ ಐಬಿ ಪ್ರಧಾನ ಕಚೇರಿಗೆ ವಿಶೇಷ ನಿರ್ದೇಶಕರಾಗಿ ಬಡ್ತಿ ಪಡೆಯುವ ಮೊದಲು, ಮಹೇಶ್ ದೀಕ್ಷಿತ್ ಅವರು ಜಮ್ಮು ಮತ್ತು ಕಾಶ್ಮೀರದ ಅಂಗಸಂಸ್ಥೆ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿದ್ದರು.
2019ರ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಉಂಟಾದ ಭದ್ರತಾ ಸನ್ನಿವೇಶವನ್ನು ನಿಭಾಯಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಆ ಅವಧಿಯಲ್ಲಿ ಗುಪ್ತಚರ ಮೌಲ್ಯಮಾಪನ ಹಾಗೂ ಭದ್ರತಾ ಯೋಜನೆ ರೂಪಿಸುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿತ್ತು. ಇದಲ್ಲದೆ,2023ರಲ್ಲಿ ಶ್ರೀನಗರದಲ್ಲಿ ನಡೆದ ಜಿ-20 ಪ್ರವಾಸೋದ್ಯಮ ಕಾರ್ಯಪಡೆ ಸಭೆ ಸಂದರ್ಭದಲ್ಲಿ ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆಯ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದರು.
ಕಳೆದ ವರ್ಷ ಮಹೇಶ್ ದೀಕ್ಷಿತ್ ಅವರನ್ನು ಐಬಿಯ ವಿಶೇಷ ನಿರ್ದೇಶಕರಾಗಿ ಬಡ್ತಿ ನೀಡಲಾಗಿದ್ದು, ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ಅವರು ಜುಲೈ 2022ರಿಂದ ಐಬಿಯನ್ನು ಮುನ್ನಡೆಸುತ್ತಿರುವ ತಪನ್ ಕುಮಾರ್ ದೇಕಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ದೇಕಾ ಅವರ ಅಧಿಕಾರಾವಧಿ ಜೂನ್ 30ರಂದು ಅಂತ್ಯಗೊಳ್ಳಲಿದೆ.