ಬೆಂಗಳೂರು, ಜೂ. 25 (DaijiworldNews/AA): 6ನೇ ತರಗತಿಗಾಗಿ ಎನ್ಸಿಇಆರ್ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಬಿಡುಗಡೆ ಮಾಡಿರುವ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

"ಈ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಡಲಾಗಿದೆ. ಕನ್ನಡದ ವೈಚಾರಿಕ ಪರಂಪರೆ, ಸ್ಥಳೀಯ ಸಂಸ್ಕೃತಿ ಹಾಗೂ ಪ್ರಾದೇಶಿಕ ಜೀವನ ಶೈಲಿಗೆ ಪುಸ್ತಕದಲ್ಲಿ ಆದ್ಯತೆ ನೀಡಿಲ್ಲ. ರಾಜ್ಯದೊಂದಿಗೆ ಯಾವುದೇ ಚರ್ಚೆ ನಡೆಸದೇ ಪುಸ್ತಕ ಬಿಡುಗಡೆ ಮಾಡಲಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಮತೋಲನ ಆಹಾರದ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರದ ಕುರಿತು ಯಾವುದೇ ಉಲ್ಲೇಖವಿಲ್ಲ. ಕೇವಲ ಸಸ್ಯಾಹಾರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಇದು ಸಮತೋಲಿತ ನಿರೂಪಣೆ ಅಲ್ಲ" ಎಂದು ತಿಳಿಸಿದ್ದಾರೆ.
"ನಾನು ಹಿಂದೂಗೆ ಹುಟ್ಟಿದವನು. ಕೃಷ್ಣನ ಬಗ್ಗೆ ನನಗೆ ಯಾವುದೇ ವಿರೋಧ ಇಲ್ಲ. ಆದರೆ ಧರ್ಮ ಮತ್ತು ಶಿಕ್ಷಣವನ್ನು ಬೆರೆಸಿ ಮಕ್ಕಳನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಬಾರದು. ನಾನು ರಕ್ತದಲ್ಲಿ ಹಿಂದೂ. ನಕಲಿ ಹಾಗೂ ಡೂಪ್ಲಿಕೇಟ್ ಹಿಂದೂಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾನು ಸಂವಿಧಾನದ ಪೀಠಿಕೆಯನ್ನು ಓದಿಸುವವನು. ಶಿಕ್ಷಣದಲ್ಲಿ ಸಮಾನತೆ ಇರಬೇಕು" ಎಂದಿದ್ದಾರೆ.
"ರಾಜ್ಯದ ಡಿಎಸ್ಇಆರ್ಟಿ ಈಗಾಗಲೇ ಸವಿ ಕನ್ನಡ, ಸಿರಿ ಕನ್ನಡ ಹಾಗೂ ತಿಳಿ ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಅವುಗಳನ್ನು ಪರಿಗಣಿಸದೇ ಹೊಸ ಪುಸ್ತಕ ಬಿಡುಗಡೆ ಮಾಡಿರುವುದು ಕನ್ನಡದ ಅಸ್ಮಿತೆಗೆ ಅಪಚಾರ ಎಂದು ಅವರು ಆರೋಪಿಸಿದರು. ಕೂಡಲೇ ಈ ಪುಸ್ತಕವನ್ನು ಹಿಂದಕ್ಕೆ ಪಡೆದು, ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಪರಂಪರೆಯನ್ನು ಒಳಗೊಂಡ ಹೊಸ ಪುಸ್ತಕವನ್ನು ಸಿದ್ಧಪಡಿಸಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಮಾಡುತ್ತೇನೆ. ಅಗತ್ಯವಿದ್ದರೆ ಹೋರಾಟದ ರೂಪ ನೀಡಲಾಗುವುದು" ಎಂದು ಎಚ್ಚರಿಸಿದ್ದಾರೆ.