ಗುವಾಹಟಿ, ಜೂ. 20 (DaijiworldNews/TA): ವನ್ಯಜೀವಿ ಕಳ್ಳಸಾಗಣೆ ವಿರುದ್ಧ ಅಸ್ಸಾಂ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಲಾಗಿದ್ದು, ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಈ ವೇಳೆ ಭಾರತದ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗೋಲ್ಡನ್ ಲಂಗೂರ್ ಜಾತಿಯ ಎಂಟು ಪ್ರಾಣಿಗಳನ್ನು ರಕ್ಷಿಸಲಾಗಿದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (STF) ಚಿರಾಂಗ್ ಜಿಲ್ಲೆಯ ಸಿಡ್ಲಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-27ರಲ್ಲಿ ತಡರಾತ್ರಿ ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಟಾಟಾ ನ್ಯಾನೋ ಕಾರುಗಳನ್ನು ತಡೆದು ಪರಿಶೀಲಿಸಿದಾಗ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
ವಾಹನಗಳ ತಪಾಸಣೆ ವೇಳೆ ಎಂಟು ಗೋಲ್ಡನ್ ಲಂಗೂರ್ಗಳನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ. ಆದರೆ ಅವುಗಳಲ್ಲಿ ಒಂದು ಪ್ರಾಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಗೋಲ್ಡನ್ ಲಂಗೂರ್ಗಳು ಭಾರತದ ಅತ್ಯಂತ ಅಪರೂಪದ ಮತ್ತು ಸಂರಕ್ಷಿತ ಪ್ರೈಮೇಟ್ ಜಾತಿಗಳಲ್ಲಿ ಒಂದಾಗಿದ್ದು, ಅವುಗಳ ಅಕ್ರಮ ಸಾಗಾಟ ಪರಿಸರವಾದಿಗಳ ಕಳವಳಕ್ಕೆ ಕಾರಣವಾಗಿದೆ.
ಪ್ರಕರಣ ಸಂಬಂಧ ಒಂಬತ್ತು ಶಂಕಿತರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಪೈಕಿ ಒಬ್ಬ ಬಾಂಗ್ಲಾದೇಶದ ಪ್ರಜೆ, ಐವರು ಪಶ್ಚಿಮ ಬಂಗಾಳದವರು ಹಾಗೂ ಮೂವರು ಅಸ್ಸಾಂ ಮೂಲದವರಾಗಿರುವುದು ತಿಳಿದುಬಂದಿದೆ. ಇದರಿಂದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಳ್ಳಸಾಗಣೆ ಜಾಲದ ಸುಳಿವು ಸಿಕ್ಕಿದೆ.
ರಕ್ಷಿಸಲಾದ ಲಂಗೂರ್ಗಳನ್ನು ಚಿರಾಂಗ್ ಜಿಲ್ಲೆಯ ನೂತನ ಚಿಕ್ನಾ ಜ್ವ್ಲಾವ್ ರಾಷ್ಟ್ರೀಯ ಉದ್ಯಾನವನ ಪ್ರದೇಶದಿಂದ ಅಕ್ರಮವಾಗಿ ಹಿಡಿದು ತರಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಅತಿಕ್ರಮಣಕಾರರು ಅಥವಾ ಅರಣ್ಯ ನಾಶ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಈ ಪ್ರಾಣಿಗಳನ್ನು ಕಳ್ಳಸಾಗಣೆ ಜಾಲಕ್ಕೆ ಮಾರಾಟ ಮಾಡಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ರಕ್ಷಿಸಲಾದ ಪ್ರಾಣಿಗಳನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಈ ಕಳ್ಳಸಾಗಣೆ ಜಾಲದ ಇತರ ಸದಸ್ಯರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ಘಟನೆ ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಸಂರಕ್ಷಣಾ ಕ್ರಮಗಳ ಅಗತ್ಯವಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.