ಬೆಂಗಳೂರು, ಮೇ. 21 (DaijiworldNews/AK):ದೆಹಲಿಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನವೊಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ದೆಹಲಿಯಿಂದ ಪ್ರಯಾಣಿಕರನ್ನು ಕರೆತಂದ AI2651 ವಿಮಾನ ಲ್ಯಾಂಡಿಂಗ್ ಆಗುವಾಗ ಅದರ ಹಿಂಭಾಗ ರನ್ವೇಗೆ ಡಿಕ್ಕಿ ಹೊಡೆದಿದೆ. ಈ ವಿಮಾನಕ್ಕೂ ಮುನ್ನ ಸರಕು ಸಾಗಣೆ ವಿಮಾನವೊಂದು ಅದೇ ರನ್ವೇಯಿಂದ ಟೇಕ್ ಆಫ್ ಆಗಿತ್ತು. ಇದರಿಂದಾಗಿ ವಾತಾವರಣದಲ್ಲಿ ಉಂಟಾದ ಗಾಳಿಯ ತೀವ್ರ ವೇಗದಿಂದ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ. ಹೀಗಿರುವಾಗ ಪೈಲಟ್ ವಿಮಾನವನ್ನು ಪುನಃ ಹಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ವಿಮಾನದ ಹಿಂಭಾಗ ರನ್ವೇಗೆ ಅಪ್ಪಳಿಸಿದೆ.
ಲ್ಯಾಂಡಿಂಗ್ ಸುರಕ್ಷಿತವಾಗಿ ಪೂರ್ಣಗೊಂಡಿತು ಮತ್ತು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸಾಮಾನ್ಯವಾಗಿ ಕೆಳಗಿಳಿದರು ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆಯ ನಂತರ ವಿಮಾನವನ್ನು ತಪಾಸಣೆಗಾಗಿ ನೆಲಕ್ಕೆ ಇಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಿಂದ ದೆಹಲಿಗೆ ಹಿಂದಿರುಗುವ AI2652 ವಿಮಾನವನ್ನು ರದ್ದುಗೊಳಿಸಲಾಗಿದೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.