ನವದೆಹಲಿ, ಮೇ. 13 (DaijiworldNews/AK): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ 2026ರ ಮಹಾ ಹಗರಣವಾಗಿದೆ. ಅಲ್ಲದೇ ಭಾರತದ ಇತಿಹಾಸದಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯ ದೊಡ್ಡ ಹಗರಣ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ನೀಟ್ ಹಗರಣದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಳೆದ 10 ವರ್ಷಗಳಲ್ಲಿ 40ಕ್ಕೂ ಹೆಚ್ಚು ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದರಿಂದ ಮೋದಿ ಅಸಮರ್ಥ ಪ್ರಧಾನಿ ಅನ್ನೋದು ಸಾಬೀತಾಗಿದೆ ಎಂದು ಅಸಮಾಧಾನ ಕಿಡಿಕಾರಿದರು.
ಪ್ರಧಾನಿ ಕಪ್ಪು ಮಾರುಕಟ್ಟೆಯಲ್ಲಿ ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಕಪ್ಪು ಮಾರುಕಟ್ಟೆಯಲ್ಲಿ ಕಪ್ಪು ಪ್ರಶ್ನೆ ಪತ್ರಿಕೆ ಹೊರ ತೆಗೆಯಬೇಕು. ಇನ್ನೂ 2019 ರಲ್ಲಿ ಶ್ರೀಮಂತರ ಪರ ಪರೀಕ್ಷೆ ಬರೆದಿದ್ದನ್ನು ನಾವು ನೋಡಿದ್ದೇವೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಜೋತಿಷಿಯನ್ನು ಓಎಸ್ಡಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ನಾಗಪುರದಿಂದ ಬಂದಿರುವವರನ್ನು ಓಎಸ್ಡಿ ಮಾಡಿಕೊಂಡಿದ್ದಾರೆ. ಅದಕ್ಕಿಂತ ಕೆಟ್ಟದ್ದೇನೂ ಮಾಡಿಲ್ಲ. ಅವರು ಅವರ ಅನುಕೂಲಕ್ಕೆ, ನಂಬಿಕೆ ಮೇಲೆ ಅವಲಂಬಿಸಿ ನೇಮಕ ಮಾಡಿದ್ದಾರೆ. ಅವರು ನೇಮಕ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.