ಬೆಂಗಳೂರು, ಮೇ. 12 (DaijiworldNews/AA): ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಾಗ ಜಿಲೆಟಿನ್ ಪತ್ತೆಯಾಗಿರೋದು ನಮ್ಮ ರಾಜ್ಯ ತಲೆತಗ್ಗಿಸೋ ವಿಷಯ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಸಂಚರಿಸುವ ಮಾರ್ಗಮಧ್ಯೆ ಜಿಲೆಟಿನ್ ಪತ್ತೆ ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, "ಪ್ರಧಾನಿ ಅವರು ಬೆಂಗಳೂರಿಗೆ ಬಂದಾಗ ಸರಿಯಾದ ಭದ್ರತೆ ಈ ಸರ್ಕಾರ ಕೊಟ್ಟಿಲ್ಲ. ಇದು ನಮ್ಮ ರಾಜ್ಯ ತಲೆ ತಗ್ಗಿಸುವಂತಹ ವಿಷಯ. ದೇಶದ ಪ್ರಧಾನಿಗೂ ರಕ್ಷಣೆ ಕೊಡದಂತದಹ ಸ್ಥಿತಿ ಈ ಸರ್ಕಾರಕ್ಕೆ ಎದುರಾಗಿದೆ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರ ಮನವಿ ವಿಚಾರವಾಗಿ ಮಾತನಾಡಿದ ಅವರು, "ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಮಾಡುವ ಧೈರ್ಯ ಇವರಿಗೆ ಇಲ್ಲ. ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಂಗ್ರೆಸ್ ದೃತಿಗೆಟ್ಟು ಹೋಗಿದೆ. ಕಾಂಗ್ರೆಸ್ ಜನರ ಆಕ್ರೋಶವನ್ನು ಎದುರಿಸುತ್ತಿದೆ. ಎಲ್ಲರಿಗೂ ಅರ್ಥ ಆಗುತ್ತೆ ಚುನಾವಣೆ ಮುಂದೂಡುವ ತಂತ್ರ" ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಹೇಳಿಕೆ ವಿಚಾರವಾಗಿ ಮಾತನಾಡಿ, "ದೇಶದ ಆರ್ಥಿಕ ದೃಷ್ಟಿಯಿಂದ ಮೋದಿ ಹೇಳಿದ್ದು ಸರಿ. ಕಾಂಗ್ರೆಸ್ ನಾಯಕರು ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಇವರಿಗೆ ದೇಶ ಮೊದಲು ಅನ್ನೋದಕ್ಕಿಂತ ರಾಜಕೀಯ ಚಟವೇ ಮೊದಲಾಗಿದೆ" ಎಂದರು.
"ಲಾಲ್ ಬಹದ್ದೂರ್ ಶಾಸ್ತ್ರಿ ಒಂದು ಹೊತ್ತಿನ ಊಟ ಬಿಡಿ ಎಂದಿದ್ರು. ಇಂದಿರಾಗಾಂಧಿಯವ್ರು ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿದ್ರು. ಪಿ. ಚಿದಂಬರಂ ಅವ್ರು ಚಿನ್ನ ಖರೀದಿ ಮಾಡಬಾರದು ಎಂದಿದ್ರು. ಆಮದು ಸುಂಕವನ್ನು ಮೂರು ಪಟ್ಟು ಹೆಚ್ಚಿಸಿದ್ರು. ಮಾಂಗಲ್ಯ ಕಟ್ಟೋದು ಬೇಡ ಎಂದು ಪ್ರಧಾನಿ ಹೇಳಿಲ್ಲ. ಕಾಂಗ್ರೆಸ್ ಬೌದ್ಧಿಕ ದಿವಾಳಿತನದ ವರ್ತನೆಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.