ಬೆಂಗಳೂರು, ಮೇ. 01 (DaijiworldNews/AA): ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡಿ, ಸೌದೆ ಭಾಗ್ಯ ಕೊಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಚುನಾವಣೆ ಮುಗಿಯಲಿ ಅಂತಾನೇ ಬಿಜೆಪಿಗರು ಕಾಯ್ತಾ ಇದ್ರು. ಚುನಾವಣೆ ಮುಗಿದ ಕೂಡಲೇ ಗ್ಯಾಸ್ ಬೆಲೆ ಹೆಚ್ಚಳ ಮಾಡಿದ್ದಾರೆ. ಜನ ಸಾಮಾನ್ಯರು ಹಾಗೂ ಕಾರ್ಮಿಕರ ಬಗ್ಗೆ ಬಿಜೆಪಿಗರಿಗೆ ಕಾಳಜಿ ಇಲ್ಲ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕಿದೆ. ಗ್ಯಾಸ್ ಬೆಲೆ ಏರಿಕೆ ಮಾಡಿ, ಇದೀಗ ಸೌದೆ ಭಾಗ್ಯ ಕೊಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಮಾಧ್ಯಮಗಳು ಕೂಡ ಈ ಬಗ್ಗೆ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಸರಿಯಿಲ್ಲ. ಅಕ್ಕಪಕ್ಕದ ರಾಷ್ಟ್ರಗಳ ಜೊತೆಗೆ ಸಂಬಂಧ ಸರಿಯಿಲ್ಲ. ಬಡವರಿಗೆ ಅನುಕೂಲ ಆಗಲಿ ಅಂತ ನಾವು ಗ್ಯಾರಂಟಿ ಯೋಜನೆ ತಂದಿದ್ದೇವೆ. ಇದರಿಂದ ಒಂದೂವರೆ ಕೋಟಿ ಕುಟುಂಬಕ್ಕೆ ಅನುಕೂಲ ಆಗುತ್ತಿದೆ. ಉಜ್ವಲ ಕೊಡುತ್ತಿದ್ದೇವೆ ಎಂದು ಪ್ರಧಾನಿಗಳು ಫೋಟೋ ಹಾಕಿಸಿಕೊಂಡು ಇದೀಗ ಸೌದೆ ಭಾಗ್ಯ ಕೊಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈಗ ಸಾವಿರ ರೂಪಾಯಿ ಜಾಸ್ತಿ ಆಗ್ತಿದೆ ಅಂದ್ರೆ ಹೇಗೆ ಬದುಕಬೇಕು, ಇದನ್ನ ಗಮನದಲ್ಲೇ ಇಟ್ಕೊಂಡು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಒಂದೂವರೆ ಕೋಟಿ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡ್ತಿದ್ದೇವೆ. ನಾವು ಹೋರಾಟವನ್ನ ಮುಂದುವರಿಸುತ್ತೇವೆ. ಬಿಜೆಪಿಯ ಅಶೋಕ್, ವಿಜಯೇಂದ್ರ ಎಲ್ಲಾ ಬೊಗಳೆದಾಸರು ಕೇವಲ ಖಾಲಿ ಮಾತು, ಟೀಕೆ ಮಾಡೋದಕ್ಕೆ ಅಷ್ಟೇ ಇರೋದು ಸಾಮಾನ್ಯ ಜನರ ಬಗ್ಗೆ ವಿಶ್ವಾಸ ಇದ್ರೆ ಮಾತಾಡಬೇಕಿತ್ತು" ಎಂದು ತಿಳಿಸಿದರು.