ನವದೆಹಲಿ, ಮಾ. 22 (DaijiworldNews/TA): “ಪ್ರೀತಿ ಒಬ್ಬ ವ್ಯಕ್ತಿಗೆ ಹೊಸ ಗುರುತನ್ನು ನೀಡಬಹುದು, ಇಲ್ಲವಾದರೆ ಅವನನ್ನು ಸಂಪೂರ್ಣವಾಗಿ ಕುಗ್ಗಿಸಬಹುದು” ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ ಬಿಹಾರದ ಆದಿತ್ಯ ಪಾಂಡೆ. ವೈಯಕ್ತಿಕ ಜೀವನದ ಹಿನ್ನಡೆಗಳನ್ನು ಮೆಟ್ಟಿಲಾಗಿಸಿಕೊಂಡು, ಅವರು ದೇಶದ ಅತ್ಯಂತ ಕಠಿಣವಾದ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 2023ರಲ್ಲಿ 48ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ.

ಆದಿತ್ಯ ಬಾಲ್ಯದಿಂದಲೇ ಮೇಧಾವಿಯಾಗಿದ್ದು, 9ನೇ ತರಗತಿಯವರೆಗೆ ಸದಾ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಆದರೆ 10ನೇ ತರಗತಿಯಲ್ಲಿ ಪ್ರೇಮದಲ್ಲಿ ಸಿಲುಕಿದ ಬಳಿಕ ಅವರ ಗಮನ ಅಧ್ಯಯನದಿಂದ ತಪ್ಪಿತು. ಪರಿಣಾಮವಾಗಿ ಅವರ ಫಲಿತಾಂಶ ಕುಸಿಯಿತು. ನಂತರ ತಂದೆಯ ಆಸೆಯಂತೆ ಎಂಜಿನಿಯರಿಂಗ್ ಪೂರ್ಣಗೊಳಿಸಿದರೂ, ಅದರಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ.
ಜೀವನದಲ್ಲಿ ತಿರುವು ತಂದ ಘಟನೆ ಎಂದರೆ ಅವರ ಪ್ರೇಮ ವಿಫಲತೆ. ಅವರು ಸಂಪೂರ್ಣವಾಗಿ ನಂಬಿದ್ದ ಸಂಬಂಧ ಮಧ್ಯದಲ್ಲೇ ಮುರಿದುಬಿದ್ದಿತು. ಈ ಹಿನ್ನಡೆ ಅವರನ್ನು ಕುಗ್ಗಿಸದೇ, ಹೋರಾಟದ ಮನೋಭಾವವನ್ನು ಹೆಚ್ಚಿಸಿತು. “ಒಂದು ದಿನ ನಾನು ಐಎಎಸ್ ಅಧಿಕಾರಿಯಾಗಿ ತೋರಿಸಿಕೊಳ್ಳುತ್ತೇನೆ” ಎಂಬ ಸಂಕಲ್ಪವನ್ನು ಮಾಡಿಕೊಂಡರು.
ಅದಾದ ಬಳಿಕ ಅವರಿಗೆ ಹೆಚ್ಚು ಪರಿಚಯವಿಲ್ಲದ ಯುಪಿಎಸ್ಸಿ ಕ್ಷೇತ್ರಕ್ಕೆ ಧುಮುಕಿದರು. ಉತ್ತಮ ಉದ್ಯೋಗವನ್ನೇ ಬಿಟ್ಟು ದೆಹಲಿಗೆ ತೆರಳಿ ಕಠಿಣ ಪರಿಶ್ರಮ ಆರಂಭಿಸಿದರು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರೂ ಧೈರ್ಯ ಕಳೆದುಕೊಳ್ಳಲಿಲ್ಲ. ಕೊನೆಗೆ 2023ರ ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಪಡೆದು ತಮ್ಮ ಕನಸನ್ನು ನನಸಾಗಿಸಿಕೊಂಡರು.
ಇಂದು ಅವರು ಜಾರ್ಖಂಡ್ನ ರಾಂಚಿಯಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮನ್ನು ಕಡಿಮೆ ಅಂದಾಜು ಮಾಡಿದವರಿಗೆ ಯಶಸ್ಸಿನ ಮೂಲಕವೇ ಉತ್ತರ ನೀಡಿದ್ದಾರೆ. ವೈಯಕ್ತಿಕ ಜೀವನದ ಹಿನ್ನಡೆಗಳಿಂದ ಕುಗ್ಗುವ ಯುವಕರಿಗೆ ಆದಿತ್ಯ ಪಾಂಡೆ ಇಂದು ಪ್ರೇರಣೆಯ ಪ್ರತಿರೂಪವಾಗಿದ್ದಾರೆ. ತಮ್ಮ ಸಾಧನೆಯ ಮೂಲಕ ‘ನಿನ್ನನ್ನು ನೀನೇ ಸಾಬೀತುಪಡಿಸಿಕೊಳ್ಳುವುದೇ ನಿಜವಾದ ಗೆಲುವು’ ಎಂಬುದನ್ನು ಅವರು ತೋರಿಸಿದ್ದಾರೆ.