ಶ್ರೀನಗರ, ಫೆ. 04 (DaijiworldNews/AA): ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾಪಡೆ, ಗುಹೆಯಲ್ಲಿ ಅಡಗಿ ಕುಳಿತಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉದಂಪುರ ಜಿಲ್ಲೆಯ ರಾಮನಗರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಪಡೆಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ್ದು, ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಹತ್ಯೆಯಾದ ಉಗ್ರರಲ್ಲಿ ಒಬ್ಬನು ಜೈಶ್ ಸಂಘಟನೆಯ ಉನ್ನತ ಮಟ್ಟದ ಕಮಾಂಡರ್ ಆಗಿದ್ದ ಎಂದು ಹೇಳಲಾಗಿದೆ.
ಜಮ್ಮು-ಕಾಶ್ಮೀರ ಪೊಲೀಸರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸಿಐಎಫ್ ಡೆಲ್ಟಾ ಪಡೆ, ವೈಟ್ ನೈಟ್ ಕಾರ್ಪ್ಸ್, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಜಂಟಿಯಾಗಿ ಜೋಫರ್ ಅರಣ್ಯ ಪ್ರದೇಶದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ವೇಳೆ ಉಗ್ರರು ಅಡಗಿ ಕುಳಿತಿರುವುದು ಖಚಿತವಾಗಿತ್ತು ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ.
ನಂತರ ಉಗ್ರರು ತಪ್ಪಿಸಿಕೊಳ್ಳದಂತೆ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಯಿತು. ಸಮನ್ವಯಿತ ಮತ್ತು ನಿಯಂತ್ರಿತ ಕಾರ್ಯಾಚರಣೆಯಿಂದಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ. ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವವನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ರುಬಾನಿ ಅಲಿಯಾಸ್ ಅಬು ಮುವಾವಿಯಾ ಎಂದು ಗುರುತಿಸಲಾಗಿದೆ ಎಂದು ಪೋಸ್ಟ್ ಮಾಡಿದೆ.
ಮೂಲಗಳ ಪ್ರಕಾರ, ಸೋಮವಾರ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಈ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಬಳಿಕ ಉಗ್ರರು ತಪ್ಪಿಸಿಕೊಳ್ಳಲು ದಟ್ಟ ಅರಣ್ಯದೊಳಗೆ ನುಸುಳಿದ್ದಾರೆ. ಉಗ್ರರ ಚಲನವಲನ ಪತ್ತೆಹಚ್ಚಲು ಡ್ರೋನ್, ಯುಎವಿ ಮತ್ತು ಇತರ ಉಪಕರಣಗಳನ್ನು ಬಳಕೆ ಮಾಡಲಾಗಿತ್ತು. ಡ್ರೋಣ್ ದೃಶ್ಯಗಳಲ್ಲಿ ಉಗ್ರರು ಅರಣ್ಯದೊಳಗಿನ ಗುಹೆಯಲ್ಲಿ ಅಡಗಿರುವುದು ಪತ್ತೆಯಾಗಿತ್ತು ಎಂದು ತಿಳಿಸಿದೆ.
ಉಗ್ರರು ಗುಹೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದೆ. ನಂತರ ಉಗ್ರರು ಮರಳಿ ಗುಹೆಯೊಳಗೆ ಹೋಗಿದ್ದಾರೆ. ನಂತರ ಸ್ಥಳವನ್ನು ಸುತ್ತುವರೆದ ಸೇನಾಪಡೆ ಉಗ್ರರನ್ನು ಎನ್ಕೌಂಟರ್ ಮಾಡಿದೆ.