ಬೆಂಗಳೂರು, ಫೆ. 04 (DaijiworldNews/AA): ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಮತ್ತು ಜೆಡಿಎಸ್ ನಿಲುವು. ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವು ಇವತ್ತು ಅಬಕಾರಿ ಇಲಾಖೆಗೂ ಬಂದು ತಲುಪಿದೆ. ರಾಜ್ಯ ಸರಕಾರವು ಒಂದು ಕಡೆ ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕವನ್ನ ಕುಡುಕರ ರಾಜ್ಯವಾಗಿ ಮಾಡುತ್ತಿದೆ. ಮನಸೋ ಇಚ್ಛೆ ಲಿಕ್ಕರ್ ಲೈಸೆನ್ಸ್ ಗಳನ್ನು ನೀಡಲಾಗುತ್ತಿದೆ" ಎಂದು ಕಿಡಿಕಾರಿದರು.
"ರಾಜ್ಯ ಸರ್ಕಾರದ ನೀತಿಯ ಪರಿಣಾಮವಾಗಿ 500 ಮೀಟರ್ಗೆ ಒಂದರಂತೆ ಲಿಕ್ಕರ್ ಅಂಗಡಿ ಸಿಗುವಂತಾಗಿದೆ. ಯಾವುದೇ ಇಲಾಖೆಯನ್ನು ತೆಗೆದುಕೊಂಡರೂ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ಹಗರಣ ಎಂದು ಅದರ ಅಧ್ಯಕ್ಷರೂ ಬಹಿರಂಗವಾಗಿ ಹೇಳಿದ್ದಾರೆ" ಎಂದರು.
ಆಡಿಯೋ ಟೇಪ್ ಬಹಿರಂಗವಾಗಿದ್ದು ಅದರಲ್ಲಿ ಅಬಕಾರಿ ಸಚಿವ ತಿಮ್ಮಾಪುರ, ಅವರ ಮಗ, ಮುಖ್ಯಮಂತ್ರಿಗಳ ಬಗ್ಗೆ ಉಲ್ಲೇಖವಾಗಿದೆ. ಅಬಕಾರಿ ಸಚಿವರು ಹಿಂದೆ ಯರ್ಯಾರು ರಾಜೀನಾಮೆ ನೀಡಿದ್ದಾರೆಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಮಡಿಕೇರಿಯ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲೂ ಜಾರ್ಜ್ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಹೇಳಿದರು.