ನವದೆಹಲಿ, ಫೆ. 04 (DaijiworldNews/AK): ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಿಂದ ಮೋದಿ ಸರ್ಕಾರ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಕಾಪಾಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ

ಅಮೆರಿಕದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಪ್ರಕಟಣೆಯ ಬೆನ್ನಲ್ಲೇ ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಪಿಯುಷ್ ಗೋಯಲ್ ಒಪ್ಪಂದದ ಬಗ್ಗೆ ಮಾತನಾಡಿ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ನಮ್ಮ ಮೇಲೆ ವಿಧಿಸಿದ್ದ 50% ಸುಂಕವನ್ನು 18% ಇಳಿಕೆ ಮಾಡಿದೆ. ಇದು ವಿಕ್ಷಿತ್ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಈ ಸುಂಕವು ಹಲವಾರು ಪ್ರತಿಸ್ಪರ್ಧಿ ರಾಷ್ಟ್ರಗಳ ಮೇಲೆ ಅಮೆರಿಕ ಹೇರಿದ ಸುಂಕಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲು ಬಯಸುತ್ತೇನೆ. ಒಪ್ಪಂದದ ನಂತರ ಭಾರತದ ಕಾರ್ಮಿಕ-ತೀವ್ರ ವಲಯಗಳು ಅಮೆರಿಕ ಮಾರುಕಟ್ಟೆಯಲ್ಲಿ ರಫ್ತು ಉತ್ತೇಜನವನ್ನು ಪಡೆಯುತ್ತವೆ ಎಂದು ಹೇಳಿದರು. ಸೂಕ್ಷ್ಮ ಕ್ಷೇತ್ರಗಳಾದ ವಿಶೇಷವಾಗಿ ಕೃಷಿ ಮತ್ತು ಡೈರಿಯನ್ನು ಭಾರತ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಎರಡೂ ದೇಶಗಳು ವಿವರವಾದ ಚರ್ಚೆ ನಡೆಸಿವೆ. ಎರಡೂ ಕಡೆಯವರು ತಮ್ಮ ತಮ್ಮ ಪ್ರಮುಖ ಮತ್ತು ಸೂಕ್ಷ್ಮ ಕ್ಷೇತ್ರಗಳನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಬಯಸುವುದು ಸಹಜ. ಒಂದು ವರ್ಷದ ಚರ್ಚೆಯೊಂದಿಗೆ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿವಿಧ ವಲಯಗಳಿಗೆ ಅಂತಿಮ ರೂಪ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.