ಬೆಂಗಳೂರು, ಜ. 31 (DaijiworldNews/TA): 16ನೇ ಹಣಕಾಸು ಆಯೋಗದ ಮುಂದೆ ಕರ್ನಾಟಕ ಸರ್ಕಾರ ಮಂಡಿಸಿರುವ ಬೇಡಿಕೆಗಳನ್ನು ಸಮಗ್ರವಾಗಿ ಪರಿಗಣಿಸಿ, ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಹಾಗೂ ವಿಶೇಷ ಅನುದಾನ ಸೇರಿ ಸಮಾನ ಹಂಚಿಕೆಯ ಮೂಲಕ ಸದೃಢ ಒಕ್ಕೂಟ ವ್ಯವಸ್ಥೆಗೆ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ ನ್ಯಾಯಸಮ್ಮತ ಮತ್ತು ಸಂವಿಧಾನಾತ್ಮಕ ಬೇಡಿಕೆಗಳನ್ನು ಆಯೋಗದ ಮುಂದಿಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ’ ಎಂಬ ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನ ಯಶಸ್ವಿಯಾಗಲು ಸಾರ್ವಜನಿಕರ ಬೆಂಬಲ ಕೋರಿದ್ದಾರೆ.
ರಾಜ್ಯಗಳಿಗೆ ತೆರಿಗೆ ಹಂಚಿಕೆ ಶೇ.50ಕ್ಕೆ ಏರಿಕೆ ಆಗಬೇಕು : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಒತ್ತಾಯಿಸುತ್ತಿದ್ದಂತೆ, ಕೇಂದ್ರದಿಂದ ರಾಜ್ಯಗಳಿಗೆ ನೀಡಲಾಗುತ್ತಿರುವ ಶೇ.41ರಷ್ಟು ತೆರಿಗೆ ಹಂಚಿಕೆಯನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. ಜೊತೆಗೆ, ಸೆಸ್ ಮತ್ತು ಸರ್ಚಾರ್ಜ್ಗಳನ್ನು ಕೇಂದ್ರದ ಒಟ್ಟು ಆದಾಯದ ಶೇ.5ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿದ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು ಎಂಬುದು ಕರ್ನಾಟಕದ ಸಮಸ್ತ ನಾಗರಿಕರ ಪರವಾಗಿ ಮಾಡಿರುವ ಪ್ರಮುಖ ಬೇಡಿಕೆಯಾಗಿದೆ.
15ನೇ ಹಣಕಾಸು ಆಯೋಗದ ಅನ್ಯಾಯ ಸರಿಪಡಿಸಬೇಕು: 15ನೇ ಹಣಕಾಸು ಆಯೋಗದ ವರದಿಯಿಂದ ಕರ್ನಾಟಕಕ್ಕೆ ಸುಮಾರು 80 ಸಾವಿರ ಕೋಟಿ ರೂಪಾಯಿಗೂ ಅಧಿಕ ತೆರಿಗೆ ನಷ್ಟ ಉಂಟಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನು ಸರಿದೂಗಿಸಲು 14ನೇ ಹಣಕಾಸು ಆಯೋಗ ನೀಡಿದ್ದ ಶೇ.4.71ಕ್ಕಿಂತ ಹೆಚ್ಚು ಪಾಲು ರಾಜ್ಯಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
15ನೇ ಆಯೋಗದಲ್ಲಿ ಅಳವಡಿಸಿಕೊಂಡ ಸೂತ್ರಗಳಲ್ಲಿಯೇ ದೋಷಗಳಿದ್ದು, ಕರ್ನಾಟಕದ ತಲಾ ಆದಾಯ ಹೆಚ್ಚಾಗಿದೆ ಎಂಬ ಕಾರಣ ನೀಡಿ ಕಡಿಮೆ ಪಾಲು ನೀಡಲಾಗಿದೆ. ತಲಾ ಆದಾಯ ಆರ್ಥಿಕತೆಯ ಒಂದು ಮಾನದಂಡ ಮಾತ್ರ ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿಗಿಂತ ಕಡಿಮೆ ಇರುವುದನ್ನು 16ನೇ ಹಣಕಾಸು ಆಯೋಗದ ಗಮನಕ್ಕೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದ್ದರಿಂದ ಆದಾಯ ಅಂತರ ಸೂತ್ರವನ್ನು ಶೇ.45ರಿಂದ 25ಕ್ಕೆ ಇಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕೆ ಶಿಕ್ಷೆ ಬೇಡ : 15ನೇ ಹಣಕಾಸು ಆಯೋಗದಲ್ಲಿ ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಗಿದೆ ಎಂದು ಟೀಕಿಸಿದ ಮುಖ್ಯಮಂತ್ರಿ, ಇದನ್ನು ಸರಿಪಡಿಸಲು 1971ರ ಜನಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
2018ರಿಂದ 2024ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ 1.56 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, 2002ರಿಂದ ನಿರಂತರವಾಗಿ ಅತಿವೃಷ್ಟಿ, ಬರ ಮತ್ತು ಪ್ರವಾಹಗಳಿಗೆ ಒಳಗಾಗುತ್ತಿದೆ. ಹೀಗಾಗಿ ಕರ್ನಾಟಕಕ್ಕೆ ನೀಡಿರುವ ಕೇವಲ 5 ರಿಸ್ಕ್ ಫ್ಯಾಕ್ಟರ್ ಅಂಕವನ್ನು 15ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಕೇಂದ್ರೀಕರಣಕ್ಕೆ ಹೊಸ ಮಾನದಂಡ : ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್ ಅಧಿಕಾರ ಹಂಚಿಕೆ ಸೂಚ್ಯಂಕ ಅಳವಡಿಸಬೇಕು. ಹಂಚಿಕೆಯ ಮಾನದಂಡದಲ್ಲಿ ಜನಸಂಖ್ಯೆಗೆ ಶೇ.60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ.20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ.20 ನಿಗದಿಪಡಿಸಬೇಕು ಎಂದು ಸಿಎಂ ಕೋರಿದ್ದಾರೆ.
ಕಲ್ಯಾಣ ಕರ್ನಾಟಕ, ಕೃಷಿ ಮತ್ತು ನೀರಾವರಿಗೆ ವಿಶೇಷ ಅನುದಾನ : ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 5 ವರ್ಷಗಳಲ್ಲಿ 25 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಕೇಂದ್ರ ಸರ್ಕಾರವೂ ಅದಕ್ಕೆ ಸಮಾನ ಮೊತ್ತವನ್ನು ಮ್ಯಾಚಿಂಗ್ ಗ್ರಾಂಟ್ ಆಗಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಆ ಭಾಗದ ಪರಿಸರ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆಗೆ 10 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕೋರಿದ್ದಾರೆ.
ಮಲೆನಾಡು, ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳ ಕೃಷಿಕರು ತೀವ್ರ ಸಂಕಷ್ಟದಲ್ಲಿದ್ದು, ಅವರಿಗೆ ವಿಶೇಷ ಅನುದಾನ ನೀಡಬೇಕು. ಜೊತೆಗೆ ಒಣಭೂಮಿ ಪ್ರದೇಶಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಅನುದಾನ ಒದಗಿಸಬೇಕು ಎಂದು ಅವರು ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ 1.15 ಲಕ್ಷ ಕೋಟಿ ಅಗತ್ಯ: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಲ್ಲಿ 1.15 ಲಕ್ಷ ಕೋಟಿ ರೂಪಾಯಿ ಹೂಡಿಕೆ ಅಗತ್ಯವಿದ್ದು, ಈ ಉದ್ದೇಶಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ 27,793 ಕೋಟಿ ರೂಪಾಯಿಗಳ ಅನುದಾನ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.