ಬೆಂಗಳೂರು, ಜ. 21 (DaijiworldNews/AA): ಪ್ರಸ್ತುತ ರಾಜ್ಯದಲ್ಲಿರುವ ಈ ಸರ್ಕಾವರೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಜನರ ವಿಶ್ವಾಸ ಸಹ ಕಳೆದುಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅಬಕಾರಿ ಇಲಾಖೆ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, "ಮಂತ್ಲಿ ಮನಿ ಬಹಿರಂಗ ಆದಾಗಲೇ ಅಬಕಾರಿ ಸಚಿವರನ್ನ ವಜಾ ಮಾಡಬೇಕಿತ್ತು. ಆದ್ರೆ ಈ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಚರಮಸೀಮೆಗೆ ಸರ್ಕಾರ ತಲುಪಿದೆ. ಸಿಎಂ ಕೂಡಾ ಇನ್ನೆಷ್ಟು ದಿನ ಇರ್ತೀನೋ? ಇರುವಷ್ಟು ದಿನ ಚೀಲ ತುಂಬಿಸಿಕೊಳ್ಳೋಣ ಅಂತ ಇದ್ದಾರೆ" ಎಂದರು.
ಸದನದಲ್ಲಿ ನರೇಗಾ ಹೆಸರು ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ವಿರೋಧ ಮಾಡುವ ಅಂಶಗಳೇ ಇಲ್ಲ. ಆದ್ರೂ ಕಾಂಗ್ರೆಸ್ನವ್ರು ಏನೋ ಆಗಿದೆ ಅಂತ ಬಾಯಿ ಬಡಿದುಕೊಳ್ತಿದ್ದಾರೆ. ಸದನದಲ್ಲಿ ನಾವೂ ಚರ್ಚೆ ಮಾಡ್ತೇವೆ. ಚರ್ಚೆಗೆ ಹೆದರೋದಿಲ್ಲ. ಗಾಂಧಿ ಹೆಸರು ತೆಗೆದು ರಾಮನ ಹೆಸರು ಇಡಲಾಗಿದೆ. ಗಾಂಧೀಜಿಗೆ ಶ್ರೀರಾಮನೇ ಪ್ರೇರಣೆ ಅಲ್ವೇ? ಎಂದು ಪ್ರಶ್ನಿಸಿದರು.
"ಸರ್ಕಾರ ಬರೆದುಕೊಟ್ಟ ಭಾಷಣವನ್ನ ರಾಜ್ಯಪಾಲರು ಓದುತ್ತಾರೆ. ಆದ್ರೆ ಈ ಸರ್ಕಾರಕ್ಕೆ ನೈತಿಕತೆ ಇಲ್ಲ, ಜನರ ವಿಶ್ವಾಸ ಕಳೆದುಕೊಂಡಿದೆ. ಎಡಪಂಥೀಯರ ಚಾಳಿ ಸಿಎಂಗೆ ಬಂದಿದೆ. ಸರ್ಕಾರ ರಾಜ್ಯಪಾಲರಿಂದ ಏನೇ ಹೇಳಿಸಬಹುದು. ಆದ್ರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ಇದೆ. ಆ ಜನಾಭಿಪ್ರಾಯವನ್ನ ಈ ಸರ್ಕಾರ ಬದಲಾಯಿಸಲು ಆಗಲ್ಲ. ಸರ್ಕಾರ ಜನರ ವಿಶ್ವಾಸ ಗೆಲ್ಲುವಂಥ ಯಾವ ಕೆಲಸವನ್ನೂ ಕಳೆದ ಎರಡೂವರೆ ವರ್ಷದಲ್ಲಿ ಮಾಡಿಲ್ಲ" ಎಂದು ವಾಗ್ದಾಳಿ ನಡೆಸಿದರು.