ಬೆಂಗಳೂರು, ಜ. 20 (DaijiworldNews/ TA): ಡಿ.ಕೆ.ಶಿವಕುಮಾರ್ ಅವರು ಆರಂಭದಿಂದಲೂ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಪಕ್ಷದ ಹಿತದೃಷ್ಟಿಯಿಂದ ಹಾಗೂ ಶಾಸಕರು ಮತ್ತು ಕಾರ್ಯಕರ್ತರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಅವರು ಪಕ್ಷದ ಆದೇಶಕ್ಕಾಗಿ ಸಹನೆಯಿಂದ ಕಾಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್, ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ, ಮುಖ್ಯಮಂತ್ರಿ ಸ್ಥಾನ ಅಷ್ಟು ಸುಲಭವಾಗಿ ದೊರೆಯುವ ಹುದ್ದೆಯಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖ್ಯ ಗುರಿ 2028ರ ವಿಧಾನಸಭಾ ಚುನಾವಣೆ ಆಗಿದ್ದು, ಪಕ್ಷದ ತೀರ್ಮಾನಕ್ಕಾಗಿ ಹಾಗೂ ಶಾಸಕರ ಮತ್ತು ನೊಂದ ಕಾರ್ಯಕರ್ತರ ಹಿತದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅವರು ಸಹನೆಯಿಂದ ಕಾಯುತ್ತಿದ್ದಾರೆ ಎಂದರು. “ನಾನು ಮೊದಲೇ ಹೇಳಿದ್ದೇನೆ, ಡಿ.ಕೆ.ಶಿವಕುಮಾರ್ ಅವರ ಹಣೆಬರಹದಲ್ಲಿ ಸಿಎಂ ಆಗಬೇಕು ಎಂದು ಬರೆದಿದ್ದರೆ ಅವರು ಆಗುತ್ತಾರೆ. ಈಗಲೂ ಅದನ್ನೇ ಹೇಳುತ್ತೇನೆ,” ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠ ವ್ಯಕ್ತಿ ಎಂದು ಬಣ್ಣಿಸಿದ ಅವರು, ಕೆಲವರು ವ್ಯಕ್ತಿ ನಿಷ್ಠರಾಗಿರುತ್ತಾರೆ, ಇನ್ನೂ ಕೆಲವರು ಕೇವಲ ಅಧಿಕಾರಕ್ಕಾಗಿ ಇರುತ್ತಾರೆ ಎಂದು ಟೀಕಿಸಿದರು. ಈಗ ಅನಿವಾರ್ಯವಾಗಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಕ್ಕನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ಗೆ ಎಲ್ಲ ವರ್ಗಗಳ ಮತಗಳು ಅಗತ್ಯವಿವೆ ಎಂದು ಹೇಳಿದ ಡಿಕೆ ಸುರೇಶ್, ಒಕ್ಕಲಿಗರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲರ ಬೆಂಬಲವೂ ಕಾಂಗ್ರೆಸ್ಗೆ ಬೇಕು ಎಂದರು. ಡಿ.ಕೆ.ಶಿವಕುಮಾರ್ ಅವರು ಎಲ್ಲ ನೋವುಗಳಲ್ಲೂ ಪಕ್ಷದ ಜೊತೆ ನಿಂತಿದ್ದಾರೆ ಎಂದು ಪ್ರಶಂಸಿಸಿದರು. ರಾಜಕಾರಣದಲ್ಲಿ ಕುರ್ಚಿ ಅಷ್ಟು ಸುಲಭವಾಗಿ ಬಿಡುವಂತಹುದಲ್ಲ, ಪಂಚಾಯತ್ ಚೇರ್ಮನ್ಗಳೇ ಅಧಿಕಾರ ಬಿಡಲು ತಡಮಾಡುತ್ತಾರೆ ಎಂಬ ಉದಾಹರಣೆ ನೀಡಿದ ಅವರು, ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯ ಎಂದರು. ರಾಹುಲ್ ಗಾಂಧಿ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ ಪಕ್ಷದ ರಾಷ್ಟ್ರೀಯ ನಾಯಕರು. ಅವರು ಎಲ್ಲ ಆಯಾಮಗಳಲ್ಲೂ ಯೋಚನೆ ಮಾಡಿ, ಎಲ್ಲರನ್ನು ಒಪ್ಪಿಸಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ. ಅಧಿಕಾರವೂ ಶಾಶ್ವತವಲ್ಲ, ತಾಳ್ಮೆಯೂ ಶಾಶ್ವತವಲ್ಲ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಸುರೇಶ್, “ನಾನು ಅವರನ್ನು ಸ್ವಾಗತಿಸುತ್ತೇನೆ. ನಾವು ಯಾರಿಗೂ ಹೋಗು ಎಂದಿಲ್ಲ, ಬರಬೇಡ ಎಂದಿಲ್ಲ. ಅವರ ಪಕ್ಷಕ್ಕೆ ಅವರೇ ಅಧಿಪತಿ. ಇದರಿಂದ ಯಾವುದೇ ವ್ಯತ್ಯಾಸ ಇಲ್ಲ. ಇನ್ನೂ ಎರಡೂವರೆ ವರ್ಷಗಳ ಸಮಯವಿದೆ,” ಎಂದು ಹೇಳಿದರು. ಜನವರಿ 29ರಂದು ಸಿಎಂ–ಡಿಸಿಎಂ ಬುಲಾವ್ ವಿಚಾರದ ಬಗ್ಗೆ ಮಾತನಾಡಿದ ಅವರು, 29ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, 31ರವರೆಗೆ ನಡೆಯಲಿದೆ. ಅಧಿವೇಶನದ ಕೊನೆಯ ಮೂರು ದಿನ ನರೇಗಾ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮತ್ತೆ ಬ್ಯಾಲೆಟ್ ವ್ಯವಸ್ಥೆ ತರಬೇಕಾದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲೇ ಬರುತ್ತವೆ ಎಂದು ಹೇಳಿದರು.
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಈ ವಿಚಾರವನ್ನು ಮುಖ್ಯಮಂತ್ರಿ ನೋಡಬೇಕು ಎಂದರು. ಗೃಹ ಸಚಿವರಿಗೆ ಅವರು ಆತ್ಮೀಯರು ಎಂಬ ಮಾತು ಕೇಳಿದ್ದೇನೆ, ಆದರೆ ಆತ್ಮೀಯತೆಯಿಗಿಂತ ಶಿಸ್ತು ಮುಖ್ಯ. ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ದಕ್ಷವಾಗಿದ್ದು, ಇಲಾಖೆಯ ಘನತೆಗೆ ಧಕ್ಕೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.