ಚೆನ್ನೈ, ಜ. 20 (DaijiworldNews/ TA): ಕೇರಳ ಕುಂಭಮೇಳದ ಅಂಗವಾಗಿ ನಡೆಯಬೇಕಿದ್ದ ರಥಯಾತ್ರೆಗೆ ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ಉಡುಮಲ್ಪೇಟೆ ಸಮೀಪದ ತಿರುಮೂರ್ತಿ ಬೆಟ್ಟದಿಂದ ಸೋಮವಾರ ಬೆಳಿಗ್ಗೆ ಆರಂಭವಾಗಬೇಕಿದ್ದ ರಥಯಾತ್ರೆಯನ್ನು ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ತಡೆದಿದ್ದಾರೆ.

ತಿರುಮೂರ್ತಿ ಬೆಟ್ಟದಲ್ಲಿರುವ ಭಾರತಪುಳ (ನೀಲಾ) ನದಿಯ ಮೂಲದಿಂದ ರಥಯಾತ್ರೆ ಆರಂಭವಾಗಬೇಕಿತ್ತು. ಆದರೆ, ಚೆನ್ನೈನ ಉನ್ನತ ಸರ್ಕಾರಿ ಅಧಿಕಾರಿಗಳಿಂದ ಅನುಮತಿ ನಿರಾಕರಣೆ ಆದ ನಂತರ ಉಡುಮಲ್ಪೇಟೆ ಪೊಲೀಸರು ಮೆರವಣಿಗೆಯನ್ನು ನಿಲ್ಲಿಸಿದ್ದಾರೆ ಎಂದು ರಥಯಾತ್ರೆಯ ಸಂಘಟಕರು ಆರೋಪಿಸಿದ್ದಾರೆ.
ಸರ್ಕಾರದ ನಿರ್ಧಾರದಿಂದಾಗಿ ರಥಯಾತ್ರೆಯ ಆಯೋಜಕರು ಪರ್ಯಾಯ ಕ್ರಮಕ್ಕೆ ಮುಂದಾಗಿದ್ದು, ರಥಯಾತ್ರೆಯಲ್ಲಿರುವ ವಿಗ್ರಹವನ್ನು ಕಾರಿನ ಮೂಲಕ ಕೇರಳ ಗಡಿಗೆ ಸಾಗಿಸಿ, ಪಾಲಕ್ಕಾಡ್ನಿಂದ ರಥಯಾತ್ರೆಯನ್ನು ಪುನರಾರಂಭಿಸುವುದಾಗಿ ತಿಳಿಸಿದ್ದಾರೆ. ಈ ರಥಯಾತ್ರೆಯು ಭಾರತಪುಳ ನದಿಯ ದಡದಲ್ಲಿರುವ ತಿರುನವಾಯದಲ್ಲಿ ನಡೆಯುತ್ತಿರುವ ಮಹಾಮಘ ಮಹೋತ್ಸವಕ್ಕೆ ಸಂಬಂಧಿಸಿದೆ. ಕೋಝಿಕ್ಕೋಡ್ ಮೂಲದ ಭಾರತೀಯ ಧರ್ಮ ಪ್ರಚಾರ ಸಭಾದ ಆಚಾರ್ಯ ಡಾ. ಶ್ರೀನಾಥ್ ಕರಾಯತ್ ಅವರು ರಥಯಾತ್ರೆಯ ನೇತೃತ್ವ ವಹಿಸಿದ್ದರು. ಭಾರತದ ಎಲ್ಲಾ ಪವಿತ್ರ ನದಿಗಳ ಸಾನ್ನಿಧ್ಯವಿದೆ ಎಂದು ನಂಬಲಾಗಿರುವ ನೀಲಾ ನದಿಯ ತಟದಲ್ಲಿರುವ ತಿರುನವಾಯದಲ್ಲಿ ಮಾಘ ಮಾಸದ ಮಹಾಮಘ ಮಹೋತ್ಸವವನ್ನು ಆಚರಿಸಲಾಗುತ್ತಿದೆ.