ಹಾವೇರಿ, ಜ. 07 (DaijiworldNews/AA): ಇನ್ನೂ ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ನನ್ನ ಆಡಳಿತ ತೃಪ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಾವೇರಿಗೆ ನಾನೇ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದೆ. ನಾನೇ ಉದ್ಘಾಟನೆ ಮಾಡ್ತಿದ್ದೀನಿ. ಮೆಡಿಕಲ್ ಕಾಲೇಜಿಗೆ ಸುಮಾರು 500 ಕೋಟಿ ಖರ್ಚು ಮಾಡಿದ್ದೀವಿ" ಎಂದು ಹೇಳಿದರು.
ಅರಸು ದಾಖಲೆ ಮುರಿದು ಸುದೀರ್ಘಕಾಲದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕುರಿತು ಮಾತನಾಡಿದ ಅವರು, "ಜನರ ಆಶೀರ್ವಾದದಿಂದ ಇಲ್ಲಿವರೆಗೂ ಬಂದಿದ್ದೀನಿ. ಇನ್ನೂ ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ನನ್ನ ಆಡಳಿತ ತೃಪ್ತಿಯಿದೆ. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಎಸ್ಸಿಪಿ ಟಿಎಸ್ಪಿ ಮಾಡಿದವರು ಯಾರ್ರೀ? ಬಿಜೆಪಿಯವರು ಏನು ಮಾಡಿಲ್ಲ ಅಂತ ಹೇಳಿದ್ರೆ? ನಾನೇನು ಮಾಡಿದ್ದೀನಿ ಅಂತ ಜನರನ್ನ ಕೇಳಬೇಕು. ಅನ್ನಭಾಗ್ಯ ಕೊಟ್ಟವರು ಯಾರು? ಕೃಷಿ ಭಾಗ್ಯ ಮಾಡಿದವರು ಯಾರು? ರೈತರಿಗೆ ಮನಸ್ವಿನಿ ಮಾಡಿದವರು, ಶಕ್ತಿ ಯೋಜನೆ ಮಾಡಿದವರು ಯಾರು? ಗೃಹಲಕ್ಷ್ಮಿ, ಗೃಹಜ್ಯೋತಿ ಮಾಡಿದವರು ಯಾರು? ಮುನ್ನೂರು ಕೋಟಿ ಮೆಡಿಕಲ್ ಕಾಲೇಜಿಗೆ ಕೊಟ್ಟಿದ್ದೀವಿ. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ಅವರು. ಬಿಜೆಪಿಯವರು ಏನು ಮಾಡಿದ್ದಾರೆ" ಎಂದು ಪ್ರಶ್ನೆ ಮಾಡಿದರು.
"ಪ್ರತಿ ವರ್ಷ 3 ಲಕ್ಷ ಮನೆ ಕಟ್ತೀವಿ ಅಂತ ಹೇಳಿದ್ದೆವು. 14,52,000 ಮನೆ ಕಟ್ಟಿದ್ದೀವಿ. 5 ವರ್ಷ ಇದ್ರಲ್ಲಾ ಎಷ್ಟು ಮನೆ ಕಟ್ಟಿಸಿದ್ದಾರೆ? ಕುಡಿಯೋ ನೀರು ಕೊಟ್ಟವರು ಯಾರು? ಅವರಿಗೆ ಸುಳ್ಳು ಹೇಳೋದೆ ಕೆಲಸ. ಕೇಂದ್ರದಿಂದ ಬರೋ ಹಣ ಬಂದಿಲ್ಲ. ಜಿಎಸ್ಟಿ ತಂದವರು ಯಾರು? ಎಷ್ಟು ವರ್ಷ ಇತ್ತು ಅದು? ಜನರನ್ನ ಸುಲಿಗೆ ಮಾಡಿ ಈಗ ಜಿಎಸ್ಟಿ ಕಡಿಮೆ ಮಾಡಿದ್ದೀವಿ ಅಂತಾರೆ. ರಾಜ್ಯಕ್ಕೆ 10 ರಿಂದ 12 ಸಾವಿರ ಕೋಟಿ ನಷ್ಟ ಆಗ್ತಿದೆ. ಇದಕ್ಕೆಲ್ಲಾ ಯಾರು ಹೊಣೆ?" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಮಗೆ ಎಷ್ಟು ಕೊಡ್ತಿದ್ದಾರೆ? 60-70 ಸಾವಿರ ಕೋಟಿ ಅಷ್ಟೇ ವಾಪಾಸ್ ಬರುತ್ತೆ. ಒಂದು ರೂಪಾಯಿ ತೆರಿಗೆ ಕೊಟ್ಟರೆ 14 ರಿಂದ 15 ಪೈಸೆ ಕೊಡ್ತಾರೆ. ಇದಕ್ಕೆಲ್ಲಾ ಏನು ಹೇಳ್ತಾರೆ. ಅಪ್ಪರ್ ಭದ್ರಾಕ್ಕೆ ಅನುದಾನ ಕೊಟ್ಟರಾ? ಇವರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಕಂಪ್ಲೀಟ್ ಮಾಡಲಿಲ್ಲ, ಯಾಕೆ ಮಾಡಲಿಲ್ಲ" ಎಂದು ಕಿಡಿಕಾರಿದರು.