ಶಿವಮೊಗ್ಗ, ಡಿ. 29 (DaijiworldNews/AA): ಯುವ ಸಮೂಹ ಇಂದು ಕರ್ನಾಟಕದಲ್ಲಿ ಡ್ರಗ್ಸ್, ಗಾಂಜಾ, ಅಫಿಮುಗಳಂತಹ ಮಾದಕ ವಸ್ತುಗಳಿಂದ ದಾರಿ ತಪ್ಪುತ್ತಿದ್ದಾರೆ. ಯುವಕರನ್ನು ಸರಿಯಾದ ದಾರಿಗೆ ತರಬೇಕಾದ ಕರ್ತವ್ಯ ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣಿಸುತ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಆವ್ಯಾಹತವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ತಿಳಿದು ಮಹಾರಾಷ್ಟ್ರದ ಪೊಲೀಸರು ಕರ್ನಾಟಕಕ್ಕೆ ಆಗಮಿಸಿದ್ದಾರೆ ಆದರೆ ಕರ್ನಾಟಕದ ಪೋಲಿಸ್ ಹಾಗೂ ಗೃಹ ಇಲಾಖೆ ಏನು ಮಾಡುತ್ತಿದೆ? ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನಕ್ಕೆ ಕನ್ನಡಿ ಹಿಡಿದಂತಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಅತ್ಯಂತ ವ್ಯಾಪಕವಾಗಿ ಹಾಗೂ ವ್ಯವಸ್ಥಿತವಾಗಿ ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು ಅದನ್ನು ನಿಯಂತ್ರಿಸುವಲ್ಲಿ ಕರ್ನಾಟಕದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಸರ್ಕಾರ ಡ್ರಗ್ಸ್ ಪೆಡ್ಲರ್ಗಳ ಕೈಯಲ್ಲಿ ಸಿಲುಕಿದೆ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.