ಲಕ್ನೋ, ಡಿ. 29 (DaijiworldNews/AA): ನಾಯಿ ಕಚ್ಚಿದ್ದ ಎಮ್ಮೆಯ ಹಾಲು ಬಳಸಿ ತಯಾರಿಸಿದ್ದ ರಾಯ್ತಾ ಸೇವಿಸಿದ್ದ 200 ಜನರಲ್ಲಿ ರೇಬೀಸ್ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ದೃಷ್ಟಿಯಿಂದ ಅವರಿಗೆಲ್ಲ ರೇಬೀಸ್ ಲಸಿಕೆ ನೀಡಲಾಗಿದೆ.

ರಾಯ್ತಾ ಸೇವಿಸಿದ್ದ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಜನರಲ್ಲಿ ರೇಬೀಸ್ ಆತಂಕ ಮೂಡಿದೆ. ಇಲ್ಲಿನ ನಿವಾಸಿಗಳು ಡಿ.23ರಂದು ನಡೆದಿದ್ದ ಅಂತ್ಯಕ್ರಿಯೆಯೊಂದಕ್ಕೆ ತೆರಳಿದಾಗ ಅಲ್ಲಿ ರಾಯ್ತಾವನ್ನು ಸೇವಿಸಿದ್ದರು. ಅದಾದ ಬಳಿಕ ಡಿ.26ರಂದು ಎಮ್ಮೆ ರೇಬೀಸ್ ರೋಗದಿಂದ ಸಾವನ್ನಪ್ಪಿತ್ತು. ಅದೇ ಸತ್ತ ಎಮ್ಮೆ ಹಾಲಿನಿಂದಲೇ ರಾಯ್ತಾವನ್ನು ತಯಾರಿಸಲಾಗಿತ್ತು ಎಂದು ತಿಳಿದ ಕೂಡಲೇ 200 ಜನರು ಮುನ್ನೆಚ್ಚರಿಕೆಯಾಗಿ ರೇಬೀಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸದ್ಯ ಗ್ರಾಮದಲ್ಲಿ ರೇಬೀಸ್ ಕಾಯಿಲೆ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ, ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿರುವುದಿಲ್ಲ. ಆದರೆ ಯಾವುದೇ ಅಪಾಯವನ್ನು ತಡೆಗಟ್ಟಲು ಲಸಿಕೆ ಹಾಕಲಾಗುತ್ತಿದೆ. ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.