ಬೀದರ್, ಡಿ. 29 (DaijiworldNews/AA): 99 ಲಕ್ಷ ರೂ. ಸಾಲ ಮರುಪಾವತಿಸದ ಆರೋಪದ ಹಿನ್ನೆಲೆ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಸವಕಲ್ಯಾಣ ನಗರ ಠಾಣೆಯಲ್ಲಿ ಉದ್ಯಮಿಯೊಬ್ಬರು ದೂರು ದಾಖಲಿಸಿದ್ದಾರೆ. 2023ರ ಚುನಾವಣೆ ವೇಳೆ ಉದ್ಯಮಿಯಿಂದ ಶಾಸಕ ಸಲಗರ್ ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ. ಸಾಲ ಪಡೆದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸೈನ್ ಮಾಡಿ ಶಾಸಕರು ಚೆಕ್ ನೀಡಿದ್ದು, ಎಷ್ಟೇ ಬಾರಿ ಹಣ ಕೇಳಿದರೂ ಶಾಸಕರು ಸಾಲ ಮರುಪಾವತಿ ಮಾಡಿಲ್ಲ. ಬಳಿಕ ಸೆ.14ರಂದು ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿ ಸಲಗರ್ ಚೆಕ್ ನೀಡಿದ್ದು, ಸೆ.16ರಂದು ಉದ್ಯಮಿ ಹೆಂಡತಿ ಹಾಗೂ ಮಗ ಶಾಸಕರ ಮನೆಗೆ ತೆರಳಿದರು.
ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಲು ಖಾತ್ರಿಪಡಿಸಲು ಹೋದ ವೇಳೆ ಶಾಸಕರ ಮನೆಯಲ್ಲಿ ಗಲಾಟೆಯಾಗಿದ್ದು, ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕಾಗಿ ಉದ್ಯಮಿ ಹೆಂಡತಿ ಹಾಗೂ ಮಗನಿಗೆ ಶಾಸಕ ಶರಣು ಸಲಗರ್ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಹಣ ವಾಪಸ್ ಕೊಡಿ ಎಂದು ಮನೆಗೆ ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೆ.19ರಂದು ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಿದರೆ ಹಿಂತಿರುಗಿ ಬಂದಿದೆ.