ಬೆಂಗಳೂರು, ಡಿ. 28 (DaijiworldNews/TA): ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಕೇವಲ ವಿಜ್ಞಾನ ಶಿಕ್ಷಣವಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸುವ ಉದ್ದೇಶದಿಂದ ಸಂಗೀತ ತರಗತಿಗಳನ್ನು ಸಹ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ವಿಜ್ಞಾನ ಮತ್ತು ಕಲೆ ಒಟ್ಟಿಗೆ ಬೆಳೆಯಬಹುದೆಂಬುದಕ್ಕೆ ಐಐಎಸ್ಸಿ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ವಿಜ್ಞಾನದ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಮತ್ತು ಏಕಾಗ್ರತೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. 2025 ವರ್ಷ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಪಡುವ ಅನೇಕ ಕ್ಷಣಗಳನ್ನು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಾಷ್ಟ್ರೀಯ ಭದ್ರತೆ, ಕ್ರೀಡಾ ಕ್ಷೇತ್ರ, ವಿಜ್ಞಾನ ಪ್ರಯೋಗಾಲಯಗಳು ಹಾಗೂ ಅಂತರರಾಷ್ಟ್ರೀಯ ವೇದಿಕೆಗಳವರೆಗೆ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು.
ದುಬೈನಲ್ಲಿ ಕನ್ನಡ ಪಾಠಶಾಲೆ : ದುಬೈನಲ್ಲಿ ನೆಲೆಸಿರುವ ಕನ್ನಡ ಕುಟುಂಬಗಳ ಮಕ್ಕಳಿಗೆ ಮಾತೃಭಾಷೆಯೊಂದಿಗೆ ನಂಟು ಉಳಿಸಿಕೊಳ್ಳಲು ಕನ್ನಡ ಪಾಠಶಾಲೆ ಸ್ಥಾಪಿಸಲಾಗಿದೆ. ಮಕ್ಕಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ತಂತ್ರಜ್ಞಾನದಲ್ಲಿ ಮುಂದುವರಿದರೂ ಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗಬಾರದು ಎಂಬ ಉದ್ದೇಶ ಇದಾಗಿದೆ ಎಂದು ಪ್ರಧಾನಿ ಹೇಳಿದರು.
ಆಪರೇಷನ್ ಸಿಂಧೂರ್ – ದೇಶದ ಹೆಮ್ಮೆ: ಆಪರೇಷನ್ ಸಿಂಧೂರ್ ಕುರಿತು ಮಾತನಾಡಿದ ಪ್ರಧಾನಿ, ‘ಈ ವರ್ಷ ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಭಾರತ ತನ್ನ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಡೀ ಜಗತ್ತು ಕಂಡಿದೆ’ ಎಂದು ಹೇಳಿದರು.
ಕ್ರಿಕೆಟ್ನಲ್ಲಿ ಭಾರತ ಸಾಧನೆ : ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು, ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಮಹಿಳಾ ಅಂಧರ ಕ್ರಿಕೆಟ್ ತಂಡವೂ ವಿಶ್ವಕಪ್ ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ. ಏಷ್ಯಾ ಕಪ್ ಟಿ20ದಲ್ಲೂ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಿದೆ ಎಂದು ಮೋದಿ ಹೇಳಿದರು.
‘ತಮಿಳು ಕರಕಲಂ’ ಅಭಿಯಾನ : ವಾರಾಣಸಿಯಲ್ಲಿ ನಡೆದ ‘ಕಾಶಿ ತಮಿಳು ಸಮಾಗಮ’ ಸಂದರ್ಭದಲ್ಲಿ ‘ತಮಿಳು ಕಲಿಯಿರಿ – ತಮಿಳು ಕರಕಲಂ’ ಅಭಿಯಾನದಡಿ 50ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತಮಿಳು ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ದೇಶದ ವಿವಿಧ ಭಾಗಗಳಲ್ಲಿ ಯುವಕರು ಮತ್ತು ಮಕ್ಕಳು ತಮಿಳು ಭಾಷೆಯತ್ತ ಆಕರ್ಷಿತರಾಗುತ್ತಿರುವುದು ಭಾರತದ ಏಕತೆಗೆ ಸಾಕ್ಷಿ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಯುವ ದಿನ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆ: ಮುಂದಿನ ತಿಂಗಳು 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ದಿನ ಆಚರಿಸಲಾಗುವುದು. ಆ ದಿನ ಯುವ ನಾಯಕರ ಸಂವಾದವೂ ಆಯೋಜಿಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದರು. ಭಾರತ ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿದ್ದು, ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯರಾದರು ಎಂದು ಮೋದಿ ಹೇಳಿದರು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಹಲವು ಉಪಕ್ರಮಗಳು 2025 ಅನ್ನು ವಿಶೇಷ ವರ್ಷವನ್ನಾಗಿ ಮಾಡಿವೆ ಎಂದು ಅವರು ಹೇಳಿದರು.